International

Seema Hyder; ಅಯೋಧ್ಯೆಗೆ ಪಾದಯಾತ್ರೆ ಮಾಡ್ತಾಳಂತೆ ಸೀಮಾ ಹೈದರ್‌..!

ಸೀಮಾ ಹೈದರ್… ದೇಶದ ಬಹುತೇಕ ಜನಕ್ಕೆ ಈ ಹೆಸರು ಪರಿಚತವಾಗಿದೆ. ಕರೋನಾ ಸಮಯದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಪಾಕಿಸ್ತಾನದ ಈ ಮಹಿಳೆ ಉತ್ತರ ಪ್ರದೇಶದ ಸಚಿನ್ ಮೀನಾ ಎಂಬಾತನಿಗೆ ಪರಿಚಯವಾಗಿದ್ದಳು. ನಾಲ್ಕು ಮಕ್ಕಳ ಈ ಮಹಿಳೆ ಜೊತೆ ಸಚಿನ್‌ಗೆ ಪ್ರೇಮಾಂಕುರವಾಗಿತ್ತು. ನಂತರ ಈಕೆ ಮಕ್ಕಳೊಂದಿಗೆ ಭಾರತಕ್ಕೆ ಬಂದು ಸಚಿನ್‌ ಜೊತೆ ವಾಸವಿದ್ದಾಳೆ. ಜೊತೆಗೆ ಭಾರತೀಯ ಪೌರತ್ವಕ್ಕಾಗಿ ಅರ್ಜಿಯನ್ನೂ ಈಕೆ ಸಲ್ಲಿಸಿದ್ದಾಳೆ.

ಇದೆಲ್ಲ ನಡೆದಿದ್ದು ಕೆಲವು ತಿಂಗಳ ಹಿಂದೆ. ಆದರೆ ಈಗ ಸೀಮಾ ಹೈದರ್‌ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ.  ಯಾಕಂದ್ರೆ ಈಕೆ ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಹೋಗುತ್ತಾಳಂತೆ. ಬಾಲರಾಮನ ದರ್ಶನಕ್ಕೆ ನಾನು ಪಾದಯಾತ್ರೆ ಮೂಲಕ ಹೋಗಬೇಕೆಂದುಕೊಂಡಿದ್ದೇನೆ. ಇದಕ್ಕೆ ಅನುಮತಿ ನೀಡಿ ಎಂದು ಸೀಮಾ ಹೈದರ್‌ ಅವರು ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾಳೆ. ನಾನು ಶ್ರೀಕೃಷ್ಣನ ಭಕ್ತೆಯಾಗಿದ್ದು, ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದೇನೆ. ಶ್ರೀರಾಮನ ದರ್ಶನ ಮಾಡಬೇಕೆಂದುಕೊಂಡಿದ್ದೇನೆ. ಇದಕ್ಕೆ ಅನುಮತಿ ಕೊಡಿ ಎಂದು ಆಕೆ ಕೇಳಿಕೊಂಡಿದ್ದಾಳೆ.

ಪ್ರೇಮಿಗಳ ದಿನದಂದು ಸೀಮಾ ಹೈದರ್ ಸುಂದರಕಾಂಡ ಪಠಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾನು ಸಂಪೂರ್ಣವಾಗಿ ಹಿಂದೂ ಆಗಿದ್ದೇನೆ ಎಂದಿರುವ ಸೀಮಾ ಹೈದರ್, ಪಾಕಿಸ್ತಾನದಲ್ಲಿದ್ದಾಗಲೂ ಹಿಂದೂ ಹಬ್ಬಗಳನ್ನು ಗುಟ್ಟಾಗಿ ಆಚರಿಸುತ್ತಿದ್ದೆ ಎಂದು ಬಹಿರಂಗಪಡಿಸಿದ್ದಾರೆ.

ಮತ್ತೊಂದೆಡೆ, ಸೀಮಾ ಹೈದರ್ ಪರ ವಕೀಲ ಎಪಿ ಸಿಂಗ್ ಈ ವಿಷಯದ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಸೀಮಾ ಹೈದರ್ ಅಯೋಧ್ಯೆಗೆ ತೆರಳುವ ಕಾನೂನು ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಸೀಮಾ ಹೈದರ್ ಇತ್ತೀಚೆಗಷ್ಟೇ ತನ್ನ ಕುಟುಂಬದ ಸದಸ್ಯರೊಂದಿಗೆ ಅಯೋಧ್ಯೆಯಲ್ಲಿರುವ ರಾಮಲಲ್ಲಾ ದರ್ಶನ ಪಡೆಯವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಳು.

ಗ್ರೇಟರ್ ನೋಯ್ಡಾದ ರಬುಪುರ ಗ್ರಾಮದಿಂದ ಅಯೋಧ್ಯೆಗೆ 645 ಕಿಲೋಮೀಟರ್ ಪಾದಯಾತ್ರೆಯನ್ನು ಕೈಗೊಳ್ಳಲು ಸಿದ್ಧ ಎಂದು ಆಕೆ ಬಹಿರಂಗಪಡಿಸಿದ್ದಾಳೆ. ಸೀಮಾ ಹೈದರ್ ಅವರಿಗೆ ಭಾರತೀಯ ಪೌರತ್ವ ನೀಡುವಂತೆ ಈಗಾಗಲೇ ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಪತ್ರ ಬರೆದಿರುವುದು ಗಮನಾರ್ಹ. ಸೀಮಾ ಹೈದರ್ ಕಾಲಕಾಲಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹೊಗಳುತ್ತಿದ್ದಾರೆ.

Share Post