CrimeDistricts

ಹಗಲಲ್ಲಿ ಪೊಲೀಸ್‌ ಕೆಲಸ, ರಾತ್ರಿ ವೇಳೆ ಕಳ್ಳತನ; ಕೊನೆಗೂ ಸಿಕ್ಕಿಬಿದ್ದ ಕಳ್ಳ ಪೊಲೀಸ್‌!

ಚಿಕ್ಕಬಳ್ಳಾಪುರ; ಹಗಲಲ್ಲಿ ಪೊಲೀಸ್‌ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ರಾತ್ರಿಯಾಗುತ್ತಿದ್ದಂತೆ ಕಳ್ಳನಾಗುತ್ತಿದ್ದ. ರೈಲುಗಳಲ್ಲಿ ಸಂಚಾರ ಮಾಡುತ್ತಾ ಮಲಗಿದ್ದವರ ಬಳಿಯಿಂದ ಚಿನ್ನಾಭರಣ ಹಾಗೂ ಹಣವನ್ನು ಕದಿಯುತ್ತಿದ್ದ. ಆತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಚಿಕ್ಕಬಳ್ಳಾಪುರ ರೈಲ್ವೆ ಹೊರಠಾಣೆ ಮುಖ್ಯಪೇದೆ ಸಿದ್ದರಾಮರೆಡ್ಡಿ ಎಂಬಾತನೇ ಸಿಕ್ಕಿಬಿದ್ದಿರುವ ಆಸಾಮಿ.

ಸಾಬಣ್ಣ ಎಂಬ ಅಪರಾಧಿಯನ್ನು ಜತೆಗಿಟ್ಟುಕೊಂಡು ಸಿದ್ದರಾಮರೆಡ್ಡಿ ಈ ಕೃತ್ಯಗಳನ್ನು ಎಸಗುತ್ತಿದ್ದ ಎನ್ನಲಾಗಿದೆ. ಕೇರಳ ಮತ್ತು ತಮಿಳುನಾಡು ರಾಜ್ಯಗಳ ಪ್ರಯಾಣಿಕರನ್ನೇ ಟಾರ್ಗೆಟ್‌ ಮಾಡುತ್ತಿದ್ದ ಈ ಇಬ್ಬರು, ನಗದು ಹಣ ಮತ್ತು ಚಿನ್ನಾಭರಣಗಳನ್ನ ಕದಿಯುತ್ತಿದ್ದರು.

ಮಧ್ಯರಾತ್ರಿ ಪ್ರಯಾಣಿಕರು ರೈಲಿನಲ್ಲಿ ಮಲಗಿರುತ್ತಾರೆ. ಇದೇ ಸಮಯದಲ್ಲಿ ಇವರು ಕಳ್ಳತನ ಮಾಡುತ್ತಿದ್ದರು. ದಂಡು ರೈಲು ನಿಲ್ದಾಣ, ಬೈಯಪ್ಪನಹಳ್ಳಿ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇವರು ಕಳ್ಳತನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಕೆಲಸದಿಂದ ಅಮಾನತು ಕೂಡಾ ಮಾಡಲಾಗಿದೆ.

 

Share Post