Crime

ಡ್ರಗ್ಸ್‌ ಮತ್ತಲ್ಲಿ ಸಿಕ್ಕಸಿಕ್ಕ ವಾಹನಗಳ ಮೇಲೆ ದಾಳಿ; ಇಬ್ಬರಿಗೆ ಗಾಯ

ತಿರುವನಂತಪುರಂ: ಡ್ರಗ್ಸ್‌ ಮತ್ತಲ್ಲಿ ಕಿಡಿಗೇಡಿಗಳು ಲಾರಿ, ಕಾರು ಸೇರಿ 16ಕ್ಕೂ ಹೆಚ್ಚು ವಾಹನಗಳನ್ನು ಜಖಂಗೊಳಿಸಿರುವ ಘಟನೆ ಕೇರಳದ ತಿರುವನಂತಪುರಂ ಜಿಲ್ಲೆಯ ಬಲರಾಮಪುರದಲ್ಲಿ ನಡೆದಿದೆ. ಈ ವೇಳೆ ಇಬ್ಬರು ವ್ಯಕ್ತಿಗಳು ಕೂಡಾ ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

   ಬಲರಾಮಪುರ, ರಸೆಲ್‌ಪುರ ಹಾಗೂ ಎರುತಾವೂರುಗಳಲ್ಲಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಡ್ರಗ್ಸ್‌ ಅಮಲಿನಲ್ಲಿ ಸಿಕ್ಕಸಿಕ್ಕ ವಾಹನಗಳ ಮೇಲೆ ಕಲ್ಲು ತೂರಿ, ದೊಣ್ಣೆಗಳಿಂದ ಹೊಡೆದು ಜಖಂಗೊಳಿಸಿದ್ದಾರೆ. ಕಿಡಿಗೇಡಿಗಳ ದಾಳಿಯಿಂದ 9 ಲಾರಿಗಳು, 3 ಕಾರಿಗಳು ಹಾಗೂ 4 ಬೈಕ್‌ಗಳಿಗೆ ಹಾನಿಯಾಗಿದೆ. ವಾಹನಗಳ ಗಾಜು ಪುಡಿಪುಡಿಯಾಗಿವೆ. ಈ ವೇಳೆ ಕಾರು, ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರ ಮೇಲೂ ದಾಳಿ ನಡೆದಿದ್ದು, ಇಬ್ಬರೂ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

  ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜಯಚಂದ್ರ ಹಾಗೂ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಶಿಬಾ ಕುಮಾರಿ ಗಾಯಗೊಂಡವರು. ಇನ್ನು ಎರುತಾವೂರು ಮೂಲದ ಅನು ಎಂಬುವರ ಅಂಗಡಿ ಮುಂದೆ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ಸಂಪೂರ್ಣ ಜಖಂಗೊಂಡಿದೆ. ಸ್ಥಳೀಯರು ಇದರಿಂದ ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಆರೋಪಿಗಳ ಬೆನ್ನಟ್ಟಿದ್ದು, ಇಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ನರುವಾಮೂಡಿನ ಮಿಥುನ್‌ ಎಂದು ಗುರುತಿಸಲಾಗಿದೆ.

 ಆರೋಪಿ ಮಿಥುನ್ ಡ್ರಗ್ಸ್ ಸೇವಿಸಿದ್ದ ಎಂದು ತನಿಖೆ ವೇಳೆ ಗೊತ್ತಾಗಿದೆ.  ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ ಎಂದು ಬಲರಾಮಪುರ ಪೊಲೀಸರು ತಿಳಿಸಿದ್ದಾರೆ.

Share Post