CrimeDistricts

ವ್ಯಕ್ತಿಗೆ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು; ಪೊಲೀಸಪ್ಪನ ಬೈಕ್‌ಗೆ ಬೆಂಕಿ ಬಿತ್ತು..!

ಚಿಕ್ಕಬಳ್ಳಾಪುರ; ಅಣ್ಣ-ತಮ್ಮಂದಿತರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗೆ ಬುದ್ಧಿವಾದ ಹೇಳಿದ ತಪ್ಪಿಗೆ ಪೊಲೀಸಪ್ಪನ ಸ್ಕೂಟರ್‌ಗೆ ಬೆಂಕಿ ಹಚ್ಚಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ. ಹಣ್ಣಿನ ವ್ಯಾಪಾರಿಯಾಗಿರುವ ಖಲೀಂ ಉಲ್ಲಾ ಎಂಬಾತನೇ ಈ ಕೃತ್ಯ ಎಸಗಿರುವಾತ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಆರೋಪಿ ಖಲೀಂ ಉಲ್ಲಾ, ನಿನ್ನೆ ತನ್ನ ಸಹೋದರರ ಜೊತೆ ಜೋರಾಗಿ ಜಗಳವಾಡಿದ್ದಾನೆ. ಅವರ ಮೇಲೆ ಹಲ್ಲೆ ಕೂಡಾ ಮಾಡಿದ್ದಾನೆ. ನಂತರ ಸಹೋದರರ ಜೊತೆ ಆಸ್ಪತ್ರೆಗೆ ಬಂದಿದ್ದಾನೆ. ಅಲ್ಲೂ ಕೂಡಾ ವಿನಾಕಾರಣ ರಂಪಾಟ ಮಾಡಿದ್ದಾನೆ. ಈ ವೇಳೆ ಎಎಸ್‌ಐ ನಂಜುಂಡ ಶರ್ಮಾ ಅವರು ಆರೋಪಿಗೆ ಬುದ್ಧಿವಾದ ಹೇಳಿಬಂದಿದ್ದಾರೆ.

ಅನಂತರವೂ ಆರೋಪಿ ಖಲೀಂ ಉಲ್ಲಾ ತನ್ನ ಸಹೋದರರ ಮನೆ ಬಳಿ ಬಂದು, ಕಾರು ಗಾಜುಗಳನ್ನು ಪುಡಿ ಮಾಡಿ ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಸ್ಥಳಕ್ಕೆ ಬಂದು ಖಡಕ್‌ ವಾರ್ನಿಂಗ್‌ ಕೊಟ್ಟು ಹೋಗಿದ್ದಾರೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಆರೋಪಿ ಖಲೀಂ ಉಲ್ಲಾ, ಎಎಸ್‌ಐ ನಂಜುಂಡ ಶರ್ಮಾ ಅವರ ಸ್ಕೂಟರ್‌ ಹಿಂಬಾಲಿಸಿದ್ದಾನೆ. ನಂಜುಂಡ ಶರ್ಮಾ ಅವರು ಸ್ಕೂಟರ್‌ ನಿಲ್ಲಿಸಿ ಮನೆ ಒಳಗೆ ಹೋಗುತ್ತಿದ್ದಂತೆ, ಅವರ ಸ್ಕೂಟರ್‌ಗೆ ಬೆಂಕಿ ಹಚ್ಚಿದ್ದಾನೆ.

ಸ್ಕೂಟರ್‌ಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದರಿಂದ ಅದು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದೆ.

 

Share Post