BengaluruPolitics

ಬೆಸ್ಕಾಂ ಸಿಬ್ಬಂದಿಯೇ ಮನೆಗೆ ತೆರಳಿ ಗೃಹಜ್ಯೋತಿ ನೋಂದಣಿ ಮಾಡಿಸಬೇಕು; ಡಿಕೆಶಿ

ರಾಮನಗರ; ಗೃಹಜ್ಯೋತಿಗೆ ನೋಂದಣಿ ಪ್ರಕ್ರಿಯೆ ಚೆನ್ನಾಗಿ ನಡೆಯುತ್ತಿದೆ. ಬಹುಬೇಗ ನೋಂದಣಿ ಆಗಲು ಬೆಸ್ಕಾಂ ಸಿಬ್ಬಂದಿ ಸಹಕರಿಸಬೇಕು. ಬೆಸ್ಕಾಂ ಸಿಬ್ಬಂದಿಯೇ ಮನೆ ಮನೆಗೆ ತೆರಳಿ ನೋಂದಣಿ ಮಾಡಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ರಾಮನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಡಿ.ಕೆ.ಶಿವಕುಮಾರ್‌ ಅಧಿಕಾರಿಗಳಿಗೆ ಈ ಸೂಚನೆ ನೀಡಿದ್ದಾರೆ.

ಬೆಸ್ಕಾಂ ಅಧಿಕಾರಿಗಳು ಮನೆ ಮನೆಗೂ ಹೋಗಬೇಕು. ಗೃಹಜ್ಯೋತಿ ಯೋಜನೆ ಬಗ್ಗೆ  ಪ್ರಚಾರ ಮಾಡಿ ನೋಂದಣಿ ಮಾಡಿಸಬೇಕು ಎಂದು ಡಿಕೆಶಿ ಹೇಳಿದರು. ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದು ನಮ್ಮ ಸರ್ಕಾರ ಅಲ್ಲ. ಈ ಹಿಂದೆ ಇದ್ದ ಬಿಜೆಪಿ ಸರ್ಕಾರ. ಬಿಜೆಪಿಯವರು ತಾವು ತಿಂದು ನಮ್ಮ ಮೂತಿಗೆ ಒರೆಸುವ ಯತ್ನ ಮಾಡಿದ್ದಾರೆ ಎಂದು ಕಿಡಿ ಕಾರಿದರು.

ನಮ್ಮ ಸರಕಾರದ 5 ಗ್ಯಾರಂಟಿ ಯೋಜನೆಗಳ ಭ್ರಷ್ಟಾಚಾರ ರಹಿತ ಅನುಷ್ಠಾನಕ್ಕೆ ಆದ್ಯತೆ ಕೊಡಬೇಕು. ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಜಿರೋ ಟಿಕೇಟ್ ಲೆಕ್ಕ ಇಡಿ. ಗೃಹ ಜ್ಯೋತಿ ರಿಜಿಸ್ಟ್ರೇಷನ್ ಗೆ ಕರೆಪ್ಷನ್ ಆಗದಂತೆ ನೋಡಿಕೊಳ್ಳಿ. ಗೃಹಲಕ್ಷ್ಮಿ ಆಪ್ ಸಿದ್ಧ ಮಾಡಿದ್ದೇವೆ. ಯೋಜನೆ ಜಾರಿ ದಿನಾಂಕ ನಾಳೆ ನಿರ್ಧಾರ ಆಗಲಿದೆ. ಪ್ರಜಾಪ್ರತಿನಿಧಿ ವಾಲೆಂಟರೀಸ್ ಜನರಿಗೆ ಸಹಾಯ ಮಾಡಬೇಕು. ಎಲ್ಲವೂ ಉಚಿತ. ಗ್ರಾಮ್ ಒನ್ ನಲ್ಲಿ ಯಾರಾದರೂ ಲಂಚ ಕೇಳಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಯಾವುದೇ ಕಾಮಗಾರಿ ಪ್ರಾರಂಭಕ್ಕೂ ಮುನ್ನಾ ಹಾಗೂ ಮುಗಿದ ನಂತರ ವಿಡಿಯೋ, ಪೋಟೋ ತೆಗೆಯಬೇಕು. ಕೆಲಸ ಪ್ರಗತಿ ಪ್ರತಿ ಹಂತದ ವಿಡಿಯೋ, ಫೋಟೋ ಇರಬೇಕು. ಕಳ್ಳಬಿಲ್ಲು, ಡಬಲ್ ಎಂಟ್ರಿಗೆ ಆಸ್ಪದ ಇಲ್ಲದಂತೆ ಎಚ್ಚರ ವಹಿಸಿ. ಎರಡು ಇಲಾಖೆ, ಎರಡು ಬಿಲ್ ಸೃಷ್ಟಿ ಮಾಡಿದರೆ ಆಕ್ಷನ್ ತಗೋತೀವಿ. ರಸ್ತೆ ಮ್ಯಾಪಿಂಗ್ ಮಾಡಿ. ಯಾವ ಇಲಾಖೆ ಅನುದಾನ, ಎಂಎಲ್‌ಎ, ಎಂಪಿ ಗ್ರಾಂಟ್ ಬಗ್ಗೆ ವಿವರ ಇಡಿ. ರಾಮನಗರ ಮಳೆ ನೀರು ಪ್ರವಾಹದಿಂದ ನಾಚಿಕೆ ಆಯ್ತು. ಮಳೆ ಪ್ರವಾಹ ಪರಿಶೀಲಿಸಿದ ದಿನ ನನಗೆ ಜ್ವರ ಬಂತು. ಇನ್ನು ಅದರ ನಡುವೆ ಜನ ಹೇಗಿದ್ದರೋ ಗೊತ್ತಿಲ್ಲ. ಉತ್ತಮ ರಸ್ತೆ, ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿ. ಪರಿಸರ ಯೋಜನೆಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಿ. ಸ್ಕೂಲ್ ಗಳ ಜತೆ ಒಪ್ಪಂದ ಮಾಡಿಕೊಳ್ಳಿ. ಸುಳ್ಳು ಲೆಕ್ಕದಲ್ಲಿ ಗಿಡ ನೆಡಬೇಡಿ ಎಂದು ಹೇಳಿದರು.

ಪುಟ್ ಪಾತ್ ಅಂಗಡಿ ಇರಬಾರದು ಎಂದಲ್ಲ. ಆದರೆ ಜನರಿಗೆ ತಿರುಗಾಡಲು ಅವಕಾಶ ಕಲ್ಪಿಸಿ. ರಸ್ತೆಯಲ್ಲಿ ಬೆಳೆಗಳ ಕಣ ಮಾಡಲು ಅವಕಾಶ ಕೊಡಬೇಡಿ. ಟ್ರಾಕ್ಟರ್ ಗಳಿಗೆ ಡ್ರೈವಿಂಗ್ ಲೈಸೆನ್ಸ್, ಇನ್ಸೂರೆನ್ಸ್ ಕಡ್ಡಾಯ ಇರಬೇಕು. ಇದಕ್ಕೆ 100 ದಿನಗಳ ಗಡುವು. ಹೋಬಳಿವಾರು ಅಭಿಯಾನ ಮಾಡಿ. ಈ ಬಗ್ಗೆ ಕರಪತ್ರ ಹಂಚಿ ಪ್ರಚಾರ ಮಾಡಿ. ವಿದ್ಯುತ್ ಬಿಲ್ಲು ಹೆಚ್ಚಳ ಬಿಜೆಪಿ ಕಾಲದ್ದು. ಅವರು ತಿಂದು ನಮ್ಮ ಮೂತಿಗ ಒರೆಸಲು ಬಂದಿದ್ದಾರೆ. ಗೃಹ ಜ್ಯೋತಿ ಯೋಜನೆ ಬಗ್ಗೆ ಅರಿವು ಮೂಡಿಸಿ. ಅಧಿಕಾರಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕು. ಯೋಜನೆ ಪ್ರಾರಂಭಕ್ಕೆ ಮುಂಚೆ ಎಲ್ಲಾ ಮಾಹಿತಿ ಪಡೆದಿದ್ದೇನೆ.. ಜಿಲ್ಲೆಯಲ್ಲಿ 2000 ಮನೆಗಳು ಮಾತ್ರ ಬಿಲ್ ಕಟ್ಟುವ ವ್ಯಾಪ್ತಿಗೆ ಬರುತ್ತವೆ. ಉಳಿದವರಿಗೆ ಯೋಜನೆ ಸೌಲಭ್ಯ ಸಿಗಬೇಕು ಎಂದರು.

ಶಿಕ್ಷಣದ ಬಗ್ಗೆ ನನ್ನದೊಂದು ಕನಸಿನ ಯೋಜನೆ ಇದೆ. ಎರಡು-ಮೂರು ಪಂಚಾಯ್ತಿಗೆ ಒಂದು ನವೋದಯ, ಡೆಲ್ಲಿ ಪಬ್ಲಿಕ್ ಸ್ಕೂಲ್ ಮಾದರಿಯಲ್ಲಿ ಸ್ಕೂಲ್ ಮಾಡಬೇಕು. ಇಡೀ ರಾಜ್ಯಕ್ಕೆ ಈ ಯೋಜನೆ ಅನ್ವಯ. ಇದರಿಂದ ಜನ ನಗರ ಪ್ರದೇಶಕ್ಕೆ ವಲಸೆ ಬರೋದು ತಪ್ಪಿಸಬೇಕು. ಇಡೀ ಜಿಲ್ಲೆಗೆ ಏನೋ ರೋಗ ಬಂದಿದೆ. ಅಧಿಕಾರಿಗಳು ಹಿಂದಿನ ಸರಕಾರದ ಮತ್ತಲ್ಲೇ ಇರುವಂತಿದೆ. ನಿಮ್ಮ ವರ್ತನೆ ಸರಿ ಮಾಡಿಕೊಳ್ಳಬೇಕು. ಸರಕಾರಿ ಆಸ್ತಿ ಒತ್ತುವರಿ ಮಾಡಿರೋ ಬಗ್ಗೆ ಪಟ್ಟಿ ಮಾಡಬೇಕು. ಬಂದಿರೋ ಅನುದಾನ, ಆಗಿರೋ ಕೆಲಸದ ಬಗ್ಗೆ ವಿವರ ಕೊಡಬೇಕು. ಕುಡಿಯುವ ನೀರು ಪೂರೈಕೆ ಯೋಜನೆಗಳ ಬಗ್ಗೆ ವರದಿ ಕೊಡಬೇಕು. ನೀರಾವರಿ ಯೋಜನೆಗಳ ಪ್ರಗತಿ ಬಗ್ಗೆ ವಿವರ ಕೊಡಿ. ರಸ್ತೆ ಕೆಲಸ ಗುಣಮಟ್ಟ, ಪ್ರಗತಿ, ಅನುದಾನ ಬಿಡುಗಡೆ ಮತ್ತಿತರ ವಿವರ ಬೇಕು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

Share Post