CrimeNational

ವೃದ್ಧರ ಮನೆಗೆ ಕನ್ನ ಹಾಕಿದರು; ಏನೂ ಸಿಗದಿದ್ದಾಗ 500 ರೂ. ಇಟ್ಟು ಹೋದರು..!

ನವದೆಹಲಿ; ಕಳ್ಳರು ವೃದ್ಧರೊಬ್ಬರ ಮನೆಗೆ ನುಗ್ಗಿದ್ದು, ಎಷ್ಟು ಹುಡುಕಾಡಿದರೂ ಅವರಿಗೆ ಬೆಲೆಬಾಳುವ ಯಾವ ವಸ್ತುವೂ ಸಿಕ್ಕಿಲ್ಲ. ಇದರಿಂದಾಗಿ ಕಳ್ಳರೇ 500 ರೂಪಾಯಿ ಇಟ್ಟುಹೋಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಇಲ್ಲಿ ರೋಹಿಣಿ ಸೆಕ್ಟರ್‌ 8ರಲ್ಲಿ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜುಲೈ 20ರಂದು ಮಧ್ಯರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಎಂಬತ್ತು ವರ್ಷ ನಿವೃತ್ತ ಎಂಜಿನಿಯರ್‌ ರಾಮಕೃಷ್ಣ ಎಂಬುವವರಿಗೆ ಸೇರಿದ ಮನೆ ಇದಾಗಿದೆ. ರಾಮಕೃಷ್ಣ ಅವರು ತಮ್ಮ ಪತ್ನಿಯೊಂದಿಗೆ ಮಗನನ್ನು ನೋಡಿ ಗುರುಗ್ರಾಮಕ್ಕೆ ತೆರಳಿದ್ದರು. ಇದಕ್ಕಾಗಿಯೇ ಕಾಯುತ್ತಿದ್ದ ಕಳ್ಳರು, ರಾತ್ರಿ ವೇಳೆ ಬೀಗ ಮುರಿದು ಒಳನುಗ್ಗಿದ್ದಾರೆ. ಆದ್ರೆ ಮನೆ ತುಂಬಾ ಹುಡುಕಿದರೂ ಏನೂ ಸಿಕ್ಕಿಲ್ಲ. ಹೀಗಾಗಿ ಕಳ್ಳರೇ ಮನೆಯಲ್ಲಿ 500 ರೂಪಾಯಿ ಇಟ್ಟುಹೋಗಿದ್ದಾರೆ.

ಜುಲೈ 21ರಂದು ರಾಮಕೃಷ್ಣ ಅವರಿಗೆ ಸ್ಥಳೀಯ ನಿವಾಸಿಗಳು ಕರೆ ಮಾಡಿ ನಿಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂದು ತಿಳಿಸಿದ್ದರು. ರಾಮಕೃಷ್ಣ ಅವರು ಬಂದು ನೋಡಿದಾಗ, ಮನೆಯಲ್ಲಿ ಯಾವುದೇ ವಸ್ತು ಕಳುವಾಗಿರಲಿಲ್ಲ. ಆದ್ರೆ ಮುಖ್ಯ ಗೇಟ್‌ ಬಳಿ 500 ರೂಪಾಯಿ ನೋಟು ಸಿಕ್ಕಿದೆ.

 

Share Post