NationalPolitics

125 ಕ್ಷೇತ್ರಗಳಿಗೆ ಕೈ ಅಭ್ಯರ್ಥಿಗಳು ಫೈನಲ್‌; ಮಾ.22ಕ್ಕೆ ರಿಲೀಸ್‌..?

ನವದೆಹಲಿ; ನಿನ್ನೆ ಸಂಜೆ ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಲಾಯಿತು. ಇದರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ 125 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಿಂದ 135 ಕ್ಷೇತ್ರಗಳ ಪಟ್ಟಿಯನ್ನು ನೀಡಲಾಗಿತ್ತು. ಇದರಲ್ಲಿ ಹತ್ತು ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿ ಫೈನಲ್‌ ಮಾಡಿಲ್ಲ. ಉಳದಿ 125 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್‌ ಆಗಿದ್ದು, ಮಾರ್ಚ್‌ 22ಕ್ಕೆ ಮೊದಲ ಪಟ್ಟಿ ಬಿಡುಗಡೆಯಾಗೋ ಸಾಧ್ಯತೆ ಇದೆ.

ಹಾಲಿ ಶಾಸಕರಾದ ಹರಿಹರದ ಆರ್‌.ರಾಮಪ್ಪ, ಕುಂದಗೋಳದ ಕುಸುಮಾ ಶಿವಳ್ಳಿ ಹಾಗೂ ಲಿಂಗಸುಗೂರು ಕ್ಷೇತ್ರದ ಶಾಸಕ ಡಿ.ಎಸ್‌.ಹೂಲಗೇರಿ ಮತ್ತೆ ಕಣಕ್ಕಿಳಿದರೆ ಗೆಲ್ಲೋದು ಕಷ್ಟ ಎಂಬ ಆಂತರಿಕ ವರದಿಗಳು ಬಂದಿವೆ. ಹೀಗಾಗಿ ಮೂರೂ ಕ್ಷೇತ್ರಗಳಲ್ಲಿ ಮತ್ತೊಂದು ಸುತ್ತಿನ ಸಮೀಕ್ಷೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಇನ್ನು ಪಾವಗಡ ಕ್ಷೇತ್ರದ ಶಾಸಕ ವೆಂಕಟರಮಣಪ್ಪ, ಅಫಜಲಪುರ ಕ್ಷೇತ್ರದ ಶಾಸಕ ಎಂ.ವೈ.ಪಾಟೀಲ್‌ ಅವರು ತಮ್ಮ ಪುತ್ರರಿಗೆ ಟಿಕೆಟ್‌ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದು. ಇದಕ್ಕೆ ಹೈಕಮಾಂಡ್‌ ಗ್ರೀನ್‌ ಸಿಗ್ನಲ್‌ ನೀಡಿದೆ ಎನ್ನಲಾಗುತ್ತಿದೆ.

ಇನ್ನೊಂದೆಡೆ ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಅವರು ವಯಸ್ಸಾದ ಕಾರಣ ಈ ಬಾರಿ ಸ್ಪರ್ಧೆ ಮಾಡುತ್ತಿಲ್ಲ. ಹೀಗಾಗಿ ಅಲ್ಲಿ, ವಿ.ಮುನಿಯಪ್ಪ ಯಾರ ಹೆಸರು ಸೂಚಿಸುತ್ತಾರೋ ಅವರಿಗೆ ಟಿಕೆಟ್‌ ನೀಡಲು ಹೈಕಮಾಂಡ್‌ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಇದೇ 20ರಂದು ಬೆಳಗಾವಿಯಲ್ಲಿ ‘ಯುವ ಕ್ರಾಂತಿ ರ‍್ಯಾಲಿ’ ನಡೆಸಲಿದ್ದಾರೆ. ಅನಂತರವೇ ಮೊದಲ ಪಟ್ಟಿ ರಿಲೀಸ್‌ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

Share Post