Lifestyle

ಮನುಷ್ಯರಿಗಷ್ಟೇ ಅಲ್ಲ..ಪ್ರಾಣಿಗಳಿಗೂ ಆರೈಕೆ ಬೇಕು: ಬೇಸಿಗೆಯಲ್ಲಿ ಜಾನುವಾರುಗಳ ಪಾಲನೆ ಹೇಗಿರಬೇಕು..?

ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೆಚ್ಚಿನ ತಾಪಮಾನ ಹೈನುಗಾರಿಕೆಯ ದನಗಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಜಾನುವಾರುಗಳು ಬಿಸಿಲಿನ ಹೊಡೆತಕ್ಕೆ ಹೆಚ್ಚು ಒಳಗಾಗುತ್ತವೆ. ಬೇಸಿಗೆಯಲ್ಲಿ ಪಶುಪಾಲನೆಯ ವಿಚಾರದಲ್ಲಿ ಕೆಲವೊಂದು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೆಚ್ಚಿನ ತಾಪಮಾನ, ಗಾಳಿಯ ಸಂಚಾರದ ಕೊರತೆ, ಶೆಡ್‌ಗಳಲ್ಲಿ ದಟ್ಟಣೆ, ನೀರಿನ ಸೌಕರ್ಯ ಕಡಿಮೆ ಲಭ್ಯತೆಯಿಂದಾಗಿ ಜಾನುವಾರುಗಳು ಬಿಸಿಲಿನ ಶಾಖಕ್ಕೆ ಗುರಿಯಾಗುತ್ತವೆ.

ಬಿಸಿಲು ಬೀಳದಂತೆ ಮುಂಜಾಗ್ರತೆ ವಹಿಸಬೇಕು. ಏಕೆಂದರೆ ಜಾನುವಾರುಗಳಿಗೆ ಆರಾಮದಾಯಕವಾದ ತಾಪಮಾನವು ಕೇವಲ 27 ಡಿಗ್ರಿ ಮಾತ್ರ. ಅದಕ್ಕಿಂತ ಹೆಚ್ಚಾದರೆ ತೊಂದರೆಯಾಗುತ್ತದೆ. ಬಾಯಲ್ಲಿ ಲಾಲಾ ರಸ ಕಡಮೆಯಾಗುತ್ತದೆ. ಆಗ ಹೆಚ್ಚು ಬಾಯಾರಿಕೆಯಿಂದಾಗಿ ಹೆಚ್ಚು ನೀರು ಕುಡಿಯುವ ಸಂಭವ ಇರುತ್ತದೆ. ಇದರಿಂದ ಮೇವು ಸರಿಯಾಗಿ ತಿನ್ನಲು ಸಾಧ್ಯವಾಗುವುದಿಲ್ಲ. ದೇಹದಲ್ಲಿ ಗ್ಲೂಕೋಸ್ ಮತ್ತು ಎಲೆಕ್ಟ್ರೋಲೈಟ್ ಮಟ್ಟಗಳು ಕಡಿಮೆಯಾಗುತ್ತವೆ. ಇದರಿಂದಾಗಿ ಹಾಲಿನ ಉತ್ಪಾದನೆಯೂ ಕ್ಷೀಣಿಸುತ್ತದೆ. ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

ಬಿಸಿಲಿಗೆ ಬಿದ್ದ ಜಾನುವಾರುಗಳನ್ನು ತಕ್ಷಣ ತಂಪಾದ ಸ್ಥಳಕ್ಕೆ ಕೊಂಡೊಯ್ಯಬೇಕು. ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ನೀರಿನಿಂದ ತೊಳೆಯಬೇಕು. ತಣ್ಣೀರಿನಲ್ಲಿ ನೆನೆಸಿದ ಬಟ್ಟೆ, ಗೋಣಿ ಚೀಲದಿಂದ ಮುಚ್ಚಿ. ಗ್ಲೂಕೋಸ್‌ ಪೂರೈಕೆ ಮಾಡಬೇಕು. ಬೇಸಿಗೆಯಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುವುದು ಇತರ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಕುಂಟುತನ, ಗಂಟಲು ಬೇನೆ, ಜಾಂಡೀಸ್ ನಂತಹ ರೋಗಗಳನ್ನು ತಡೆಗಟ್ಟಲು ಲಸಿಕೆಗಳನ್ನು ನೀಡಬೇಕು. ಕೊಳಚೆ ನೀರು ಕುಡಿಯುವುದರಿಂದ ಜೀರ್ಣಾಂಗವ್ಯೂಹದ ಕಾಯಿಲೆಗಳು ಬರಬಹುದಾದ್ದರಿಂದ ಶುದ್ಧ ನೀರು ಒದಗಿಸಬೇಕು. ಕಾಲಕಾಲಕ್ಕೆ ಅವುಗಳನ್ನು ಸ್ವಚ್ಛವಾಗಿ ಮತ್ತು ತಂಪಾಗಿ ಇರಿಸಿ.

ಸೂರ್ಯನ ಶಾಖವನ್ನು ಕಡಿಮೆ ಮಾಡಲು ಉತ್ತಮ ಗಾಳಿ ಮತ್ತು ಬೆಳಕನ್ನು ಒದಗಿಸಬೇಕು. ಶೆಡ್‌ಗಳ ಸುತ್ತಲೂ ಮರಗಳ ಇದ್ದರೆ ಇನ್ನೂ ಉತ್ತಮ. ಜಾನುವಾರುಗಳನ್ನು ದಿನಕ್ಕೆ ಎರಡರಿಂದ ಮೂರು ಬಾರಿ ತೊಳೆಯಬೇಕು. ಕುಡಿಯಲು ಹೆಚ್ಚು ನೀರು ಸಿಗಬೇಕು. ಸುಲಭವಾಗಿ ಜೀರ್ಣವಾಗುವಂತೆ ಗಂಜಿ ಕೊಡಬೇಕು. ಹಸಿರು ಹುಲ್ಲನ್ನು ಹೆಚ್ಚು ನೀಡಬೇಕು. ಮೇವು ಕೂಡ ಬೆಳಗ್ಗೆ ಮತ್ತು ಸಂಜೆ ಕೊಡಬೇಕು. ಹಗಲಿನಲ್ಲಿ ಹಸಿರು ಹುಲ್ಲು ಮತ್ತು ರಾತ್ರಿ ಒಣ ಹುಲ್ಲು ನೀಡಬೇಕು. ಬೇಸಿಗೆಯಲ್ಲಿ ಆಚೆ ಮೇಯಲು ಬಿಡುವುದು ಹೆಚ್ಚು ಸೂಕ್ತವಲ್ಲ.

Share Post