CrimeDistricts

ಪತ್ನಿ ಕೊಂದ ಪಾಪಿ ಪತಿ: ಅನಾಥವಾದ ಮಕ್ಕಳು

ಬಾಗಲಕೋಟೆ: ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಸುಳ್ಳಲ್ಲ. ಗಂಡ-ಹೆಂಡತಿ ಗಲಾಟೆಯಲ್ಲಿ ಮಕ್ಕಳು ಬಡವಾಗಿದ್ದಲ್ಲ…ಅನಾಥವಾಗಿವೆ. ಯಾವುದೋ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಚಿಕ್ಕ-ಪುಟ್ಟ ಕೆಲಸ ಮಾಡ್ಕೊಂಡು ಹಾಯಾಗಿ ಸಂಸಾರ ಮಾಡ್ತಿದ್ದ ಮನೆಯೀಗ ದುಃಖದ ಮಡುವಿನಲ್ಲಿದೆ.

ಹೌದು ರಾತಿ ಕುಡಿದು ಬಂದು ಪತ್ನಿಯನ್ನು ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್‌ ನಗರದ ಕವಿಶೆಟ್ಟಿ ಎಂಬಲ್ಲಿ ನಡೆದಿದೆ. ಮದೀನಾ(27)ಕೊಲೆಯಾದ ದುರ್ದೈವಿ. ಮದೀನಾ ಗಂಡ ಮೆಹಬೂಬ್‌ ರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದಾನೆ. ಯಾವುದೂ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿದೆ. ಗಲಾಟೆ ಅತಿರೇಖಕ್ಕೆ ಹೋಗಿ ಕುಡಿದ ಅಮಲಿನಲ್ಲಿ ಕೈಗೆ ಸಿಕ್ಕಿದ ರಾಡ್‌ನಿಂದ ಮದೀನಾ ತಲೆಗೆ ಮೆಹಬೂಬ್‌ ಗಟ್ಟಿಯಾಗಿ ಹೊಡೆದಿದ್ದಾನೆ. ಹೊಡೆತದ ರಭಸಕ್ಕೆ ಮದೀನಾ ರಕ್ತಸಿಕ್ತವಾಗಿ ಕೆಳಗೆ ಬಿದ್ದು ಅಸುನೀಗಿದ್ದಾಳೆ. ಘಟನೆ ಕಂಡು ಇಬ್ಬರು ಪುಟ್ಟ ಮಕ್ಕಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಜೋರಾಗಿ ಕೂಗಲೂ ಬಿಡದೆ. ಅಳುವುದಕ್ಕೂ ಬಿಡದೆ ಮೆಹಬೂಬ್‌ ಮಕ್ಕಳನ್ನು ಕೂಡಹಾಕಿದ್ದಾನೆ ರಕ್ತದ ಮಡುವಿನಲ್ಲಿ ಬಿದ್ದ ತಾಯಿ ಶವದ ಮುಂದೆ ಮಕ್ಕಳು ಬೆಳಗಿನ ಜಾವ ಮೂರು ಗಂಟೆವರೆಗೂ ಕಾಲ ಕಳೆದಿದ್ದಾರೆ. ಪಾಪಿ ಮೆಹಬೂಬ್‌ ಗೊರಕೆ ಹೊಡೆಯುತ್ತಿದ್ದಂತೆ ಮಕ್ಕಳು ಹೊರಗೆ ಬಂದು ಅಕ್ಕ-ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ.

ಪೊಲೀಸರು ಬರವಷ್ಟರಲ್ಲಿ ಮೆಹಬೂಬ್‌ ಪರಾರಿಯಾಗಿದ್ದ. ಆರೋಪಿಗಾಗಿ ಬಲೆ ಬೀಸಿದ್ದಾರೆ. ಇತ್ತ ಅಮ್ಮನನ್ನು ಕಳೆದುಕೊಂಡು ಪುಟ್ಟ ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಸಂಬಂಧ ಇಳಕಲ್‌ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post