CrimeDistricts

ಹಾಸನದಲ್ಲಿ ಮಲಗಿದ್ದಲ್ಲೇ ಇಬ್ಬರು ಯುವಕರ ಸಾವು; ಕಾರಣ ನಿಗೂಢ..!

ಹಾಸನ; ಉತ್ತರ ಪ್ರದೇಶದಿಂದ ಕೆಲಸ ಅರಸಿ ಹಾಸನಕ್ಕೆ ಬಂದಿದ್ದ ಇಬ್ಬರು ಯುವಕರು ಮಲಗಿದಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ವಾರದ ಹಿಂದಷ್ಟೇ ಹಾಸನಕ್ಕೆ ಬಂದಿದ್ದ ಯುವಕರು ಹಾಸನ ಹೊರವಲಯದ ಹನುಮಂತಪುರದಲ್ಲಿ ಬಾಡಿಗೆ ರೂಮ್‌ ಪಡೆದಿದ್ದರು. ಕೆಲಸ ಗಿಟ್ಟಿಸಿಕೊಂಡು ಎರಡು ದಿನ ಕೆಲಸಕ್ಕೆ ಹೋಗಿದ್ದ ಇಬ್ಬರೂ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಮೂವತ್ತು ವರ್ಷದ ರಾಮ್‌ ಸಂಜೀವನ್‌ ಹಾಗೂ ಇಪ್ಪತ್ಕಾಲ್ಕು ವರ್ಷದ ನವಾಬ್‌ ಎಂಬುವವರೇ ಸಾವನ್ನಪ್ಪಿದವರು. ಹಾಸನದಲ್ಲಿ ವಿಕ್ರಂ ಎಂಬ ಸ್ನೇಹಿತ ಕೆಲಸ ಮಾಡುತ್ತಿದ್ದ. ಆತನಿಗೆ ಕೆಲಸ ಕೊಡಿಸುವಂತೆ ರಾಮ್‌ ಸಂಜೀವನ್‌ ಹಾಗೂ ನವಾಬ್‌ ಕೇಳಿಕೊಂಡಿದ್ದರು. ವಿಕ್ರಂ ಭರವಸೆಯಂತೆ ಹಾಸನಕ್ಕೆ ಬಂದಿದ್ದ ಇಬ್ಬರೂ, ಹಾಸನದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಆದ್ರೆ ಎರಡು ದಿನ ಕೆಲಸ ಮಾಡಿದ ಮೇಲೆ ವಿಪರೀತ ಜ್ವರ ಹಾಗೂ ನೆಗಡಿ ಕಾಣಿಸಿಕೊಂಡಿತ್ತು. ಹೀಗಾಗಿ ಇಬ್ಬರೂ ಕೆಲಸಕ್ಕೆ ರಜೆ ಹಾಕಿ ಗುರುವಾರ ಖಾಸಗಿ ಕ್ಲಿನಿಕ್‌ಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ರಾತ್ರಿ ಊಟ ಮಾಡಿ ಮಲಗಿದ್ದ ಅವರು ಬೆಳಗ್ಗೆ ಆಗೋಷ್ಟರಲ್ಲಿ ಸಾವನ್ನಪ್ಪಿದ್ದಾರೆ.

ಬೆಳಗ್ಗೆ ಕೊಠಡಿಯ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಮಾಲೀಕ ಬಾಗಿಲು ಒಡೆದು ನೋಡಿದಾಗ ಇಬ್ಬರೂ ಮೃತಪಟ್ಟಿರುವುದು ಕಂಡುಬಂದಿದೆ. ಈ ಬಗ್ಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share Post