Districts

ಮೈಸೂರು ಅರಮನೆಗೆ ವಿಚಿತ್ರ ಸಮಸ್ಯೆ!; ಪಾರಿವಾಳಗಳಿಂದ ಎದುರಾಗ್ತಿದೆ ಕಂಟಕ!

ವಿಶ್ವವಿಖ್ಯಾತ ಮೈಸೂರು ಅರಮನೆಗೆ ಈಗ ವಿಚಿತ್ರ ಸಮಸ್ಯೆ ಎದುರಾಗಿದೆ. ಅರಮೆನೆಗೆ  ಪಾರಿವಾಳದ ಹಿಕ್ಕೆಗಳಿಂದ ಕಂಟಕ ಎದುರಾಗಿದೆ.. ಇದರಿಂದ ಕಟ್ಟಡಕ್ಕೆ ಧಕ್ಕೆಯಾಗಲಿದೆ ಎಂದು ಇತಿಹಾಸ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಪಾರಿವಾಳದ ಹಿಕ್ಕೆಗಳಲ್ಲಿ ಯೂರಿಕ್ ಆಮ್ಲವನ್ನು ಹೊಂದಿರುತ್ತವೆ. ಯೂರಿಕ್ ಆಸಿಡ್ ಇರುವ ಈ ಪಾರಿವಾಳಗಳ ಹಿಕ್ಕೆ ಪಾರಂಪರಿಕ ಕಟ್ಟಡಗಳ ಮೇಲೆ ಬೀಳಿಸುವುದರಿಂದ ಕಟ್ಟಡಕ್ಕೆ ಹಾನಿಯಾಗುತ್ತದೆ ಎಂದು ಇತಿಹಾಸ ತಜ್ಞ ಪ್ರೊ. ರಂಗರಾವ್ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರೊ.ರಂಗರಾವ್‌ ಮಾತನಾಡಿದ್ದು, ಯಾವುದೇ ತಾಮ್ರ ಅಥವಾ ಉಕ್ಕಿನ ಪಾತ್ರೆಯಲ್ಲಿ ಪಾರಿವಾಳದ ಹಿಕ್ಕೆಗಳನ್ನು ಕೆಲವು ದಿನಗಳ ಕಾಲ ಇಟ್ಟರೆ ಅವುಗಳಿಗೆ ತೂತು ಬೀಳುತ್ತದೆ..  ಅಂತೆಯೇ, ಅಮೃತಶಿಲೆಯ ರಚನೆಯ ಮೇಲೆ ಪಾರಿವಾಳದ ಹಿಕ್ಕೆಗಳು ಬಿದ್ದರೂ, ಅಮೃತಶಿಲೆಗೂ ಹಾನಿಯಾಗುವ ಅಪಾಯವಿದೆ.. ಹಾಗಾಗಿ ಈ ಪಾರಿವಾಳದ ಹಿಕ್ಕೆಗಳಿಂದ ಅರಮನೆಗೆ ಸಾಕಷ್ಟು ಹಾನಿಯಾಗಲಿದೆ ಎಂದು ಅವರು ಹೇಳಿದ್ದಾರೆ. ಮೈಸೂರಿನ ಹತ್ತನೇ ಚಾಮರಾಜ ವೃತ್ತ ಮತ್ತು ನಾಲ್ಕನೇ ಕೃಷ್ಣರಾಜ ವೃತ್ತವನ್ನು ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ಪಾರಿವಾಳಗಳು ಈಗ ಈ ವೃತ್ತಕ್ಕೆ ಗೊತ್ತಿಲ್ಲದೆ ಹಾನಿ ಮಾಡುತ್ತಿವೆ.

ಹಾಗಾಗಿ ಅರಮನೆಯ ಈ ವೃತ್ತಗಳ ಬಳಿ ಪಾರಿವಾಳಗಳು ಬರುವುದನ್ನು ತಡೆಯಬೇಕು. ಈಗ ಪಾರಿವಾಳಗಳನ್ನು ಅರಮನೆಗಳು ಮತ್ತು ರಾಜರ ವೃತ್ತಗಳಿಂದ ದೂರವಿಡಬೇಕೆಂಬ ಬೇಡಿಕೆಯು ವೇಗ ಪಡೆದುಕೊಂಡಿದೆ. ಪಾರಿವಾಳಗಳು ಅರಮನೆಯಿಂದ ದೂರ ಹೋಗಬೇಕೆಂದರೆ, ಅವುಗಳಿಗೆ ಆಹಾರವನ್ನು ನೀಡುವುದನ್ನು ನಿಲ್ಲಿಸಲು ಸಲಹೆ ನೀಡಲಾಗುತ್ತದೆ. ಅರಮನೆಯ ಸುತ್ತಲಿನ ಪಾರಿವಾಳಗಳಿಗೆ ಆಹಾರ ನೀಡಲು ಕೆಲವರು ಧಾನ್ಯವನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಕೆಲವರು ಮೂಟೆಗಟ್ಟಲೆ ಅಕ್ಕಿ, ಗೋದಿ ತಂದು ಸುರಿಯುತ್ತಿದ್ದಾರೆ.. ಇದರಿಂದಾಗಿ ಸಮಸ್ಯೆ ಉಂಟಾಗುತ್ತಿದೆ ಎಂದು ಇತಿಹಾಸ ತಜ್ಞರು ಹೇಳುತ್ತಿದ್ದಾರೆ..

 

Share Post