Districts

25 ಯುವತಿಯನ್ನು ಮದುವೆಯಾಗಿದ್ದ ಶಂಕರಪ್ಪ ನೇಣಿಗೆ ಶರಣು

ತುಮಕೂರು: 25 ವರ್ಷದ ಯುವತಿಯನ್ನು ಮದುವೆಯಾಗಿ ರಾಜ್ಯಾದ್ಯಂತ ಪ್ರಚಾರ ಪಡೆದಿದ್ದ ತುಮಕೂರು ಜಿಲ್ಲೆ ಕುಣಿಗಲ್‌ ತಾಲ್ಲೂಕಿನ ಶಂಕರಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಸ್ವಗ್ರಾಮ ಅಕ್ಕಿಮರಿಪಾಳ್ಯದ ಹೊಲದಲ್ಲಿ ಮರವೊಂದಕ್ಕೆ ಶಂಕರಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಅಕ್ಕಿಮರಿಪಾಳ್ಯದ ನಿವಾಸಿ ಶಂಕರಪ್ಪಗೆ 47 ವರ್ಷ ವಯಸ್ಸಾಗಿತ್ತು. ಐದು ತಿಂಗಳ ಹಿಂದೆ 25 ವರ್ಷದ ಮೇಘನಾ ಸ್ವತಃ ಅವರೇ ಬಂದು ಶಂಕರಪ್ಪ ಅವರನ್ನು ಮದುವೆಯಾಗುವುದಾಗಿ ಹೇಳಿದ್ದರು. ಮೇಘನಾ ಅವರು ಗಂಡ ಎರಡು ವರ್ಷದ ಹಿಂದೆ ಮನೆ ಬಿಟ್ಟು ಹೋದವರು ಬಂದಿರಲಿಲ್ಲ. ಹೀಗಾಗಿ ಮೇಘನಾ, ಶಂಕರಪ್ಪ ಅವರನ್ನು ವರಿಸಿದ್ದರು. ಈ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು.

ಅಂದಹಾಗೆ, ಶಂಕರಪ್ಪ ಅವರನ್ನು ಮದುವೆಯಾಗಿದ್ದ ಮೇಘನಾ, ಬೇರೆ ಮನೆ ಮಾಡುವಂತೆ ಪೀಡಿಸುತ್ತಿದ್ದರಂತೆ. ಅತ್ತೆ ಜೊತೆ ಇರಲು ಆಗುತ್ತಿಲ್ಲ. ಬೇರೆ ಕಡೆ ಸಂಸರ ಹೂಡೋಣ ಎಂದು ಮೇಘನಾ ಹೇಳಿದ್ದರಂತೆ. ಆದ್ರೆ ಶಂಕರಪ್ಪ ಇದಕ್ಕೆ ಒಪ್ಪಿಲ್ಲ. ಇದರಿಂದಾಗಿ ದಿನವೂ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ನಿನ್ನೆ ಕೂಡಾ ಜಗಳ ನಡೆದಿದೆ. ಇದರಿಂದ ಮನನೊಂದ ಶಂಕರಪ್ಪ, ಹೊಲದಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

 

Share Post