CrimeDistricts

ಮನೆಯಲ್ಲಿ 9 ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಅಸ್ಥಿಪಂಜರ ಪತ್ತೆ..!

ಬೆಳಗಾವಿ; ಒಂಬತ್ತು ತಿಂಗಳ ಹಿಂದೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಆತನ ಅಸ್ಥಿಪಂಜರ ಈಗ ಮನೆಯಲ್ಲಿ ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲ್ಲೂಕಿನ ಶಿವಾಪುರದಲ್ಲಿ ಈ ಅಸ್ಥಪಂಜರ ಪತ್ತೆಯಾಗಿದೆ.

ಶಿವಾಪುರ ಗ್ರಾಮದ ಪ್ರಕಾಶ ತವನಪ್ಪ ಮುರಗುಂಡಿ ಎಂಬವವರೇ ಸಾವನ್ನಪ್ಪಿರುವವರು.  9 ತಿಂಗಳ ಹಿಂದೆಯೇ ಅವರು ಮಲಗಿದ್ದಾಗ ಸಾವನ್ನಪ್ಪಿರುವ ಸಾಧ್ಯತೆ ಇದೆ. ಆದರೆ ಯಾರೂ ನೋಡಿಕೊಂಡಿಲ್ಲ. ಈಗ ಅವರು ಅಸ್ಥಿಪಂಜರವಾಗಿ ಪತ್ತೆಯಾಗಿದ್ದಾರೆ.

ಪ್ರಕಾಶ ಅವರ ತಂದೆ- ತಾಯಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಒಬ್ಬ ಕಿರಿಯ ಸಹೋದರ ಇದ್ದು, ವರ್ಷದ ಹಿಂದೆ ಅವರೂ ಊರು ಬಿಟ್ಟು ಧಾರವಾಡ ಜಿಲ್ಲೆಯ ಕಲಘಟಗಿಗೆ ಹೋಗಿದ್ದಾರೆ. ಇದರಿಂದಾಗಿ ಬುದ್ಧಿಮಾಂದ್ಯರಾಗಿದ್ದ ಪ್ರಕಾಶ ಅವರು ಈ ಮನೆಯಲ್ಲಿ ಒಬ್ಬರೇ ವಾಸ ಮಾಡುತ್ತಿದ್ದರು. ಹಳೇ ಕಟ್ಟಡದಲ್ಲಿ ಏಕಾಂಗಿಯಾಗಿ  ಒಳಗಿನಿಂದ ಬಾಗಿಲು ಹಾಕಿಕೊಂಡು ಇರುತ್ತಿದ್ದರು.

ಆದರೆ ಒಂಬತ್ತು ತಿಂಗಳಿಂದ ಪ್ರಕಾಶ್‌ ಅವರು ಕಾಣಿಸದಿದ್ದರೂ ಯಾರೂ ಆ ಕಡೆ ತಲೆ ಹಾಕಿಲ್ಲ. ಇದೀಗ ಯಾರೋ ನೋಡಿದಾಗ ಅಸ್ಥಿಪಂಜರವಾಗಿ ಸಿಕ್ಕಿದ್ದಾರೆ. ಹೀಗಾಗಿ, ಅವರ ಸಾವಿನ ಬಗ್ಗೆ ಅನುಮಾನ ಮೂಡಿದೆ. ಈ ಬಗ್ಗೆ ಮರುಗೋಡ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Share Post