DistrictsPolitics

ಬಿಜೆಪಿ ಪರ ಹೋದವರನ್ನು ನಂಬಿ ಬರಬೇಡಿ; ಸಿದ್ದುಗೆ ಕೆ.ಎಚ್‌.ಮುನಿಯಪ್ಪ ಎಚ್ಚರಿಕೆ

ಕೋಲಾರ; ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದವರನ್ನು ನಂಬಿ ಕೋಲಾರಕ್ಕೆ ಬರಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ. ಕೋಲಾರದಲ್ಲಿ ಮಾತನಾಡಿರುವ ಅವರು, ಕೋಲಾರ ಕಾಂಗ್ರೆಸ್‌ನಲ್ಲಿ ತುಂಬಾ ಸಮಸ್ಯೆಗಳಿವೆ. ಅವನ್ನು ಪರಿಹರಿಸದೇ ಬಂದರೆ ಗೆಲುವು ಕಷ್ಟವಾಗಬಹುದು ಎಂದು ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆಂಬ ಮಾತುಗಳು ಇತ್ತೀಚೆಗೆ ಕೇಳಿಬರುತ್ತಿವೆ. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ, ಕಾಂಗ್ರೆಸ್‌ನಲ್ಲಿದ್ದುಕೊಂಡು ಕೆಲವರು ಬಿಜೆಪಿ ಪರ ಕೆಲಸ ಮಾಡಿದರು. ಅಂತಹವರನ್ನು ಸಿದ್ದರಾಮಯ್ಯ ನಂಬಿಕೊಂಡು ಬಂದರೆ ಗೆಲುವು ಕಷ್ಟವಾಗುತ್ತದೆ. ಹೀಗಾಗಿ ಮೊದಲು ಕೋಲಾರದ ಕಾಂಗ್ರೆಸ್‌ನಲ್ಲಿರುವ ಸಮಸ್ಯೆಯನ್ನು ಸರಿಪಡಿಸಬೇಕು. ಅನಂತರ ಕೋಲಾರಕ್ಕೆ ಬನ್ನಿ ಎಂದು ಹೇಳಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹಾಗೂ ಕೊತ್ತೂರು ಮಂಜು ಸೇರಿದಂತೆ ಹಲವು ನಾಯಕರು ಬಿಜೆಪಿ ಪರ ಕೆಲಸ ಮಾಡಿದ್ದಾರೆ ಎಂಬ ಆರೋಪವಿದೆ. ಈ ಕಾರಣಕ್ಕೆ ಕೆ.ಎಚ್‌.ಮುನಿಯಪ್ಪ ಸೋತರು ಎಂದು ಹೇಳಲಾಗುತ್ತದೆ. ಹೀಗಾಗಿ ಕಾಂಗ್ರೆಸ್‌ ನಾಯಕರ ಜೊತೆ ಕೆ.ಎಚ್‌.ಮುನಿಯಪ್ಪ ಮುನಿಸುಕೊಂಡಿದ್ದಾರೆ. ಪಕ್ಷದಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದ ಮುನಿಯಪ್ಪ ಸದ್ಯಕ್ಕೆ ಕಾಂಗ್ರೆಸ್‌ನಲ್ಲೇ ಉಳಿದುಕೊಂಡಿದ್ದಾರೆ. ಅವರು ಮುಂಬರು ಚುನಾವಣೆಯಲ್ಲಿ ಯಾವ ತಂತ್ರಗಾರಿಕೆ ನಡೆಸುತ್ತಾರೆ ಅನ್ನೋದರ ಬಗ್ಗೆ ಕುತೂಹಲ ಮೂಡಿದೆ.

 

Share Post