DistrictsPolitics

ತಮಿಳುನಾಡಿಗೆ ನೀರು ಬಿಡುತ್ತಿರುವುದೇ ನವರಂಗಿ ಆಟ; ಡಿಕೆಶಿಗೆ ಸಿ.ಟಿ.ರವಿ ಟಾಂಗ್‌

ಮಂಡ್ಯ; ತಮಿಳುನಾಡಿಗೆ ಕಾವೇರಿ ನೀರು ಬಿಡುವ ಮೂಲಕ ನಿಮ್ಮ ಬದ್ಧತೆ ತೋರಿಸುವುದಲ್ಲ. ತಮಿಳುನಾಡಿಗೆ ನೀರು ಬಿಡುತ್ತಿರುವುದೇ ನವರಂಗಿ ಆಟ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಸಿ.ಟಿ.ರವಿ ಟಾಂಗ್‌ ಕೊಟ್ಟಿದ್ದಾರೆ. ಮಂಡ್ಯದಲ್ಲಿ ಮಾತನಾಡಿರುವ ಅವರು, ನಿನ್ನೆ ಅಕ್ಬರ್‌-ಬೀರ್‌ಬಲ್‌ ಕಥೆ ಕೇಳಿ ಅಶ್ವತ್ಥನಾರಾಯಣ್‌ ಅವರನ್ನು ನವರಂಗಿ ನಾರಾಯಣ ಎಂದೂ, ಅದೇ ರೀತಿಯ ಅಶೋಕ್‌, ಬೊಮ್ಮಾಯಿ, ಸಿ.ಟಿ.ರವಿರನ್ನು ಅಪಹಾಸ್ಯ ಮಾಡಿದ್ದ ಡಿ.ಕೆ.ಶಿವಕುಮಾರ್‌ಗೆ ತಿರುಗೇಟು ನೀಡಿದರು.

ಡಿ.ಕೆ.ಶಿವಕುಮಾರ್‌ ಕೈಯಲ್ಲಿ ಈಗ ಅಧಿಕಾರ ಇದೆ. ಅದಕ್ಕೆ ಏನೇನೋ ಮಾತನಾಡುತ್ತಾರೆ. ಅವರು ಬದ್ಧತೆ ಪ್ರದರ್ಶಿಸಬೇಕು ಅಂದ್ರೆ ತಮಿಳುನಾಡಿಗೆ ನೀರು ಬಿಡಬಾರದಿತ್ತು. ಆದ್ರೆ, ಲೋಕಸಭೆಯಲ್ಲಿ ಬೆಂಬಲಕ್ಕಾಗಿ ತಮಿಳುನಾಡಿಗೆ ನೀರು ಬಿಟ್ಟು ರಾಜ್ಯಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಇದೇ ನಿಜವಾದ ನವರಂಗಿ ಆಟ ಎಂದು ಸಿ.ಟಿ.ರವಿ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್‌ ಸರ್ಕಾರ ಬಂದು ಎರಡು ತಿಂಗಳಲ್ಲೇ ಮೂವತ್ತಕ್ಕೂ ಹೆಚ್ಚು ಶಾಸಕರು ಸಚಿವರ ವಿರುದ್ಧ ಸಿಎಂಗೆ ದೂರು ಕೊಟ್ಟರು. ದಲ್ಲಾಳಿ, ಮಧ್ಯವರ್ತಿಗಳು ಅಡ್ಡ ಬರುತ್ತಿದ್ದಾರೆ. ಮಂತ್ರಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂದು ಗೋಳು ತೋಡಿಕೊಂಡು ಸಿಎಂಗೆ ಪತ್ರ ಬರೆದಿದ್ದರು. ಇದನ್ನೆಲ್ಲಾ ನೋಡಿದರೆ ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ ಅನ್ನೋದು ಅರ್ಥವಾಗುತ್ತದೆ ಎಂದೂ ಸಿ.ಟಿ.ರವಿ ಹೇಳಿದ್ದಾರೆ.

Share Post