CrimeDistricts

ಕರೆಂಟ್‌ ಬಿಲ್‌ ಕಟ್ಟಿ ಎಂದಿದ್ದಕ್ಕೆ ಲೈನ್‌ಮ್ಯಾನ್‌ಗೆ ಚಪ್ಪಲಿಯಿಂದ ಹಲ್ಲೆ

ಕೊಪ್ಪಳ; ರಾಜ್ಯ ಕಾಂಗ್ರೆಸ್‌ ಸರ್ಕಾರ ಚುನಾವಣೆ ಸಮಯದಲ್ಲಿ ನೀಡಿದ್ದ ಉಚಿತ ವಿದ್ಯುತ್‌ ಭರವಸೆಯನ್ನು ಈಡೇರಿಸಲು ಹೊರಟಿದೆ. ಕೆಲವರು ಸರ್ಕಾರ ಆದೇಶ ಹೊರಡಿಸುವುದನ್ನೂ ಕಾಯದೇ ವಿದ್ಯುತ್‌ ಬಿಲ್‌ ಕಟ್ಟೋದಿಲ್ಲ ಎಂದು ಹೇಳುತ್ತಿದ್ದಾರೆ. ಈ ಬೆನ್ನಲ್ಲೇ ವ್ಯಕ್ತಿಯೊಬ್ಬ ವಿದ್ಯುತ್‌ ಬಿಲ್‌ ಕೇಳಲು ಬಂದ ಲೈನ್‌ಮ್ಯಾನ್‌ಗೆ ಚಪ್ಪಲಿಯಿಂದ ಹಲ್ಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. 

  ಕೊಪ್ಪಳದ ಕುಕನಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಚಂದ್ರಶೇಖರ್‌ ಹಿರೇಮಠ್‌ ಎಂಬುವವರು ಆರು ತಿಂಗಳಿನಿಂದ ವಿದ್ಯುತ್‌ ಬಿಲ್‌ ಪಾವತಿ ಮಾಡಿಲ್ಲ. ಅದರ ಮೊತ್ತ 9990 ರೂಪಾಯಿ ಆಗಿತ್ತು. ಹೀಗಾಗಿ ಲೈನ್‌ಮ್ಯಾನ್‌ ಮಂಜುನಾಥ್‌ ಅವರು ಸ್ಥಳಕ್ಕೆ ಬಂದು ವಿದ್ಯುತ್‌ ಬಿಲ್‌ ಪಾವತಿ ಮಾಡುವಂತೆ ಕೇಳಿದ್ದಾರೆ. ಆದ್ರೆ ಚಂದ್ರಶೇಖರ್‌ ಬಿಲ್‌ ಪಾವತಿ ಮಾಡೋದಕ್ಕೆ ಒಪ್ಪಿಲ್ಲ. ಹೀಗಾಗಿ ಇಬ್ಬರ ನಡುವೆ ಮಾತಿನಚಕಮಕಿ ನಡೆದಿದೆ.

ಇದೇ ವೇಳೆ ಕುಪಿತಗೊಂಡ ಚಂದ್ರಶೇಖರ್‌ ಹಿರೇಮಠ್‌ ಅವರು, ಲೈನ್‌ಮ್ಯಾನ್‌ ಮಂಜುನಾಥ್‌ ಮೇಲೆ ಹಲ್ಲೆ ಮಾಡಿದ್ದಾರೆ. ಕಪಾಳಕ್ಕೆ ಹೊಡೆದಿದ್ದಾರೆ. ಸಾಲದೆಂಬಂತರ ಚಪ್ಪಲಿಯಿಂದಲೂ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಮುನಿರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಬೇಕೆಂದು ಜೆಸ್ಕಾಂ ಸಿಬ್ಬಂದಿ ಆಗ್ರಹ ಮಾಡಿದ್ದಾರೆ.

Share Post