CrimeDistrictsHealth

Accident; ಪಾದಚಾರಿಗಳ ಮೇಲೆ ಉರುಳಿದ ಕಬ್ಬಿನ ಟ್ರ್ಯಾಕ್ಟರ್‌; ಮೂವರ ದುರ್ಮರಣ!

ಚಿಕ್ಕೋಡಿ; ಒಂದಷ್ಟು ಪಾದಚಾರಿಗಳು ಅವರ ಪಾಡಿಗೆ ಅವರು ನಡೆದುಕೊಂಡು ಹೋಗುತ್ತಿದ್ದರು. ಆದ್ರೆ ಯಮ ಟ್ರ್ಯಾಕ್ಟರ್‌ ರೂಪದಲ್ಲಿ ಬಂದಿದ್ದ. ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಟ್ರ್ಯಾಕ್ಟರ್‌ ಉರುಳಿಬಿದ್ದಿತ್ತು. ಇದರಿಂದ ಮೂವರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹದ್ದೊಂದು ಹೃದಯವಿದ್ರಾವಕ ಘಟನೆ ನಡೆದಿರೋದು ಚಿಕ್ಕೋಡಿಯ ಕಾಗವಾಡ ಬಳಿಯ ಶೇಡಬಾಳ ಪಟ್ಟಣದ ಸಮೀಪದಲ್ಲಿ.!

ನಾಲ್ವರು ಪಾದಚಾರಿಗಳು ಶೇಡಬಾಳ ಗ್ರಾಮದಿಂದ ಹೊರಟಿದ್ದರು. ಇದೇ ವೇಳೆ ಉಗಾರ ಕಡೆಗೆ ಹೊರಟಿದ್ದ ಟ್ರ್ಯಾಕ್ಟರ್‌ನಲ್ಲಿ ಕಬ್ಬು ತುಂಬಲಾಗಿತ್ತು. ಟ್ರ್ಯಾಲಿ ತುಂಬಾ ಕಬ್ಬು ತುಂಬಿದ್ದರಿಂದ ಅದು ನಿಯಂತ್ರಣಕ್ಕೆ ಸಿಗದೇ ಉರುಳಿಬಿದ್ದಿದೆ. ಅದರ ಕೆಳಗೆ ಸಿಲುಕಿದ ಮೂವರು ಪಾದಚಾರಿಗಳು ಅಲ್ಲಿಯೇ ಸಾವನ್ನಪ್ಪಿದ್ದಾರೆ. ಕೂಲಿ ಮಾಡುವ ಮೂವರು ಸಾವನ್ನಪ್ಪಿದ್ದು, ಅವರನ್ನೇ ನಂಬಿಕೊಂಡಿದ್ದ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ.

ಶೇಡಬಾಳ ಗ್ರಾಮದ ಚಂಪಾ ಲಕ್ಕಪ್ಪ ತಳಕ್ಕಟಿ (45), ಭಾರತಿ ವಡ್ಡಾಳೆ (30) ಹಾಗೂ ಮಾಲು ರಾವಸಾಬ ಐನಾಪೂರ (55) ಎಂಬುವವರೇ ಸಾವನ್ನಪ್ಪಿದವರು. ಶೇಕವ್ವ ನರಸಪ್ಪ ಎಂಬುವವರು ಬದುಕುಳಿದಿದ್ದಾರಾದರೂ, ಅವರ ಸ್ಥಿತಿಯೂ ಚಿಂತಾಜನಕವಾಗಿದೆ. ಈ ವಿಷಯ ತಿಳಿದ ಕೂಡಲೇ ಕಾಗವಾಡ ಶಾಸಕ ರಾಜು‌ ಕಾಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

 

Share Post