Cinema

ನೆಟ್ಟಿಗರಿಗೆ ಆಹಾರವಾದ ʻಮೆಗಾ ಸೊಸೆʼ, ಸೋಶಿಯಲ್‌ ಮೀಡಿಯಾದಲ್ಲಿ ಹಿಗ್ಗಾಮುಗ್ಗ ತರಾಟೆ

ಹೈದರಾಬಾದ್:‌ ಮೆಗಾಸ್ಟಾರ್ ಚಿರಂಜೀವಿ ಸೊಸೆ, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಸತೀಮಣಿ ಉಪಾಸನಾ  ವಿವಾದಕ್ಕೀಡಾಗಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಉಪಾಸನಾ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಾಜ ಸೇವೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಿಗೆ ಹಲವಾರು ವಿಷಯಗಳ ಬಗ್ಗೆ ತಿಳಿವಳಿಕೆ ಮೂಡಿಸಿ ಹೆಸರು ಮಾಡಿರುವ ಉಪಾಸನಾ ಮೇಲೆ ನೆಟ್ಟಿಗರು ಇಷ್ಟೊಂದು ಕೋಪಗೊಳ್ಳಲು ಕಾರಣವೇನು ಅಂತೀರಾ..?

ಜನವರಿ 26 ರಂದು ಭಾರತದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಉಪಾಸನಾ ಅವರು ದೇಶದ ಜನರಿಗೆ ಶುಭಾಶಯಗಳನ್ನು ಕೋರುತ್ತಾ, ತಮ್ಮ ಫೇಸ್‌ಬುಕ್ ಪುಟದಲ್ಲಿ ದೇವಾಲಯದ ಗೋಪುರವೊಂದನ್ನು ಹಂಚಿಕೊಂಡಿದ್ದಾರೆ. ದೇವಾಲಯದ ಗೋಪುರದ ಮೇಲಿರುವ ದೇವರ ಮೂರ್ತಿಗಳ ಮಧ್ಯದಲ್ಲಿ ಕೆಲ ಸಾಮಾನ್ಯ ಜನರು ನಿಂತಿರುವಂತೆ ಫೋಟೋ ಎಡಿಟ್ ಮಾಡಲಾಗಿದೆ. ಅದರಲ್ಲಿ ʻನಾನು ನನ್ನ ಪತಿ ರಾಮ್‌ಚರಣ್‌ ಕೂಡ ಇದ್ದಾರೆ ಕಂಡುಹಿಡಿಯಿರಿʼ ಎಂದು ಹೇಳಿದ್ದಾರೆ. ಜೊತೆಗೆ ಫೋಟೋ ತುಂಬಾ ಇಷ್ಟವಾಯಿತು ಅದನ್ನು ಎಡಿಟ್ ಮಾಡಿರುವ ಕಲಾವಿದ ನನ್ನನ್ನು ಭೇಟಿ ಆದರೆ ಅವರನ್ನು ಅಭಿನಂದಿಸಬೇಕು ಅಂದುಕೊಂಡಿದ್ದೇನೆ ಎಂದಿದ್ದಾರೆ.

ಈಗ ಅವರು ಹಂಚಿಕೊಂಡಿರುವ ಫೋಟೊ ಹಾಗೂ ಅವರ ಮಾತುಗಳಿಗೆ ನೆಟ್ಟಿಗರು ಕಿಡಿ ಕಾರಿದ್ದಾರೆ. ನೀವು ಎಷ್ಟೇ ದೊಡ್ಡವರಾದರೂ ದೇವರ ಗೋಪುರವನ್ನು ಇಟ್ಕೊಂಡು ನಿಮ್ಮ ಪ್ರಚಾರ ಮಾಡುವುದು ಸರಿಯಲ್ಲ ಎಂದಿದ್ದಾರೆ. ನಿಮ್ಮ ಈ ನಡವಳಿಕೆ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಟೀಕಿಸಿದ್ದಾರೆ.

ಫೋಟೋ ಎಡಿಟ್‌ ಮಾಡಿದ ಕಲಾವಿದನನ್ನು ಹೊಗಳುವುದಕ್ಕಿಂತ, ಸಾವಿರಾರು ವರ್ಷಗಳ ಹಿಂದೆ ಗೋಪುರ ಕಟ್ಟಿದ ಕಲಾವಿದರನ್ನು ನೆನಪಿಸಿಕೊಳ್ಳಿ, ಗಣರಾಜ್ಯೋತ್ಸವದಂದು ನೀವು ಕೊಟ್ಟ ಸಂದೇಶವೇನು? ಈ ಫೋಟೋ ಶೇರ್ ಮಾಡಿ ಭಾರತೀಯರನ್ನು ಅವಮಾನಿಸುವುದೇಕೆ?” ಎಂದು ಕಮೆಂಟ್ ಮಾಡಿದ್ದಾರೆ. ಕೂಡಲೇ ಪೋಸ್ಟ್‌ ಡಿಲೀಟ್‌ ಮಾಡುವಂತೆ ನೆಟ್ಟಿಗರು ಹಾಗೂ ಮೆಗಾ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ.

Share Post