BengaluruCrime

ಸ್ಕೂಟರ್‌ ಮೇಲೆ ಯಾರೋ ಇಟ್ಟಿದ್ದ ಬಾಕ್ಸ್‌ನಲ್ಲಿತ್ತು ಕೋಟಿ ಹಣ; ಸ್ಕೂಟರ್‌ ಓನರ್‌ ಏನು ಮಾಡಿದ ಗೊತ್ತಾ..?

ಬೆಂಗಳೂರು; ಆ ಯುವಕನೊಬ್ಬ ಖಾಸಗಿ ಬ್ಯಾಂಕ್‌ ಒಂದರಲ್ಲಿ ಕ್ರೆಡಿಟ್‌ ಕಾರ್ಡ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುವಾತ. ಕೆಲಸದ ಮೇಲೆ ಚಂದ್ರಾಲೇಔಟ್‌ಗೆ ಹೋಗಿದ್ದ. ಸ್ಕೂಟರ್‌ ನಿಲ್ಲಿಸಿ ಕೆಲಸ ಮುಗಿಸಿಕೊಂಡ ವಾಪಸ್‌ ಬರುವಷ್ಟರಲ್ಲಿ ಸ್ಕೂಟರ್‌ ಮೇಲೆ ಒಂದು ಬಾಕ್ಸ್‌ ಇತ್ತು. ಸುತ್ತಲೂ ನೋಡಿದರೆ ಯಾರೂ ಅದರ ವಾರಸುದಾರರು ಕಾಣಲಿಲ್ಲ. ಆ ಬಾಕ್ಸ್‌ನಲ್ಲಿ ಏನಿದೆ ಎಂದು ತೆರೆದು ನೋಡಿದರೆ ಒಳಗೆ ಕಂತೆ ಕಂತೆ ಹಣ. ಎಲ್ಲವೂ 500ರ ನೋಟುಗಳು..! ಅದನ್ನು ನೋಡಿ ಯಾರಿಗೆ ತಾನೇ ಆಸೆಯಾಗದು ಹೇಳಿ… ಆತ ಕೂಡಲೇ ಅದನ್ನು ಶ್ರೀಗರದ ಮನೆಗೆ ಕೊಂಡೊಯ್ದಿದ್ದ. ಖುಷಿಯಿಂದ ಹಣ ಎಷ್ಟಿದೆ ಅಂತಾನೂ ಎಣಿಸಿದ್ದ. ಅದರಲ್ಲಿ ಎಷ್ಟಿತ್ತು ಗೊತ್ತೇ..? ಬರೋಬ್ಬರಿ 94 ಲಕ್ಷ ರೂಪಾಯಿ.. ನಂಬಿದ್ರೆ ನಂಬಿ ಬಿಟ್ರೆ ಇಡಿ ಇದು ನಿಜವಾಗಲೂ ನಡೆದಿರೋ ಘಟನೆ…

ಹೌದು, ಚಂದ್ರಾಲೇಔಟ್‌ ನಿವಾಸಿ ವರುಣ್‌ ಗೌಡ ಎಂಬುವವರು ಸೈಟ್‌ ಖರೀದಿ ಮಾಡಲು 94 ಲಕ್ಷ ರೂಪಾಯಿ ಹಣ ಕೂಡಿಟ್ಟಿದ್ದರು. ಅದನ್ನು ಎಣಿಸೋದಕ್ಕಾಗಿ ಅವರು ಸ್ನೇಹಿತನ ಅಂಗಡಿಗೆ ತೆಗೆದುಕೊಂಡು ಹೋಗುತ್ತಿದ್ದರು. ಒಂದು ಬಾಕ್ಸ್‌ನಲ್ಲಿ ಹಣವನ್ನು ಪ್ಯಾಕ್‌ ಮಾಡಿ, ಅದರ ಒಂದು ಬ್ಯಾಗ್‌ ತೆಗೆದುಕೊಂಡು ಮನೆಯಿಂದ ಹೊರಬಂದಿದ್ದಾರೆ. ಕಾರಿನ ಬಾಗಿಲು ತೆಗೆಯಲೆಂದು ಅವರು ಹಣವಿದ್ದ ಬಾಕ್ಸ್‌ನ್ನು ಪಕ್ಕದಲ್ಲೇ ನಿಲ್ಲಿಸಿದ್ದ ಸ್ಕೂಟರ್‌ ಮೇಲೆ ಇರಿಸಿದ್ದಾರೆ. ಅನಂತರ ಅವರು ಅದನ್ನು ಮರೆದು, ಕೈಲಿದ್ದ ಮತ್ತೊಂದು ದಾಖಲೆಗಳ ಬ್ಯಾಗನ್ನು ಮಾತ್ರ ಕಾರಲ್ಲಿಟ್ಟು ಅಲ್ಲಿಂದ ತೆರಳಿದ್ದಾರೆ. ಸ್ವೇಹಿತನ ಅಂಗಡಿಗೆ ಹೋಗುವವರೆಗೂ ಹಣದ ಬಾಕ್ಸ್‌ ಅಲ್ಲೇ ಬಿಟ್ಟಿದ್ದೇನೆ ಎಂಬುದು ಅರಿವಾಗಿಲ್ಲ. ಸ್ನೇಹಿತನ ಅಂಗಡಿಗೆ ಹೋದ ಮೇಲೆ ಹಣ ಬಾಕ್ಸ್‌ ಬಿಟ್ಟಿರುವುದು ಗೊತ್ತಾಗಿದೆ. ಕೂಡಲೇ ಅವರು ವಾಪಸ್ಸಾಗಿದ್ದಾರೆ. ಆದ್ರೆ ಅಲ್ಲಿ ಬಾಕ್ಸ್‌ ಸಿಕ್ಕಿಲ್ಲ. ಕೂಡಲೇ ಅವರು ಚಂದ್ರಲೇಔಟ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇತ್ತ ಹಣದ ಬಾಕ್ಸ್‌ ತೆಗೆದುಕೊಂಡು ಹೋಗಿದ್ದ ವರುಣ್‌ ಗೌಡ, ಹಣ ಎಣಿಸಿ ಮನೆಯಲ್ಲಿಟ್ಟಿದ್ದಾನೆ ಅಷ್ಟೇ. ಅದನ್ನು ತೆಗೆದು ಖರ್ಚು ಮಾಡೋ ಧೈರ್ಯ ಬಂದಿಲ್ಲ. ಸೆಕೆಂಡ್‌ ಹ್ಯಾಂಡ್‌ ಇನ್ನೋವಾ ಕಾರು ಕೊಳ್ಳಲು ಪ್ರಯತ್ನಿಸಿದ್ದಾನಾದರೂ, ಧೈರ್ಯ ಸಾಲದೇ ಸುಮ್ಮನಾಗಿದ್ದಾನೆ. ನಾಲ್ಕು ದಿನದಿಂದ ಮನೆಯಲ್ಲೇ ಹಣವನ್ನಿಟ್ಟುಕೊಂಡಿದ್ದಾನೆ. ಇತ್ತ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ವರುಣ್‌ ಗೌಡನನ್ನು ಹಿಡಿದಿದ್ದಾರೆ. ಆತನ ಮನೆಯಲ್ಲಿ ಪೂರ್ತಿ ಹಣ ಸಿಕ್ಕಿದೆ.

ಆದ್ರೆ ಹಣ ಸಿಕ್ಕಿದ್ದರೂ ಪೊಲೀಸರಿಗೆ ತಿಳಿಸದ ಕಾರಣ ವರುಣ್‌ ಗೌಡನನ್ನು ಪೊಲೀಸರು ಬಂಧಿಸಿದ್ದಾರೆ.

 

Share Post