BengaluruCinemaPolitics

Shivarajkumar; ಸೋಮಣ್ಣ ಸ್ಪರ್ಧೆ ವಿಚಾರವೇ ಗೊತ್ತಿರಲಿಲ್ಲ; ಮಧುಗಾಗಿ ಬಂದೆ ಎಂದ ಶಿವಣ್ಣ

ಬೆಂಗಳೂರು; ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರು ನಿನ್ನೆ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರ ರೋಡ್‌ ಶೋ ನಡೆಸಿದ್ದರು. ಈ ವಿಚಾರವಾಗಿ ಶಿವಣ್ಣ ವಿರುದ್ಧ ಅಪಸ್ವರ ಎದ್ದಿತ್ತು. ಸೋಮಣ್ಣ ಅವರು ಪುನೀತ್‌ ರಾಜ್‌ಕುಮಾರ್‌ ಅವರ ಹೆಸರಿನಲ್ಲಿ ಸುಸಜ್ಜಿತ ಆಸ್ಪತ್ರೆಯನ್ನೇ ಕಟ್ಟಿಸಿದ್ದಾರೆ. ಹೀಗಿದ್ದರೂ ಅವರ ವಿರುದ್ಧ ಪ್ರಚಾರಕ್ಕೆ ಬಂದಿರುವುದಕ್ಕೆ ಕೆಲವರು ಆಕ್ಷೇಪ ಎತ್ತಿದ್ದರು.

ಸಚಿವ ಸೋಮಣ್ಣ ಹಾಗೂ ಸಂಸದ ಪ್ರತಾಪ ಸಿಂಹ ಈ ಬಗ್ಗೆ ಮಾತನಾಡಿದ್ದರು. ಆದ್ರೆ ಶಿವರಾಜ್‌ ಕುಮಾರ್‌ ಇದಕ್ಕೆ ಉತ್ತರ ನೀಡಿದ್ದಾರೆ. ವರುಣಾದಲ್ಲಿ ಸೋಮಣ್ಣ ಸ್ಪರ್ಧೆ ಮಾಡಿದ್ದಾರೆ ಎಂಬುದೇ ನನಗೆ ಗೊತ್ತಿರಲಿಲ್ಲ. ಸಿದ್ದರಾಮಯ್ಯ ಪರವಾಗಿ ಪ್ರಚಾರಕ್ಕೆ ಹೋಗಿದ್ದೆ. ಅವರ ವಿರುದ್ಧ ಯಾರಿದ್ದಾರೆ ಅನ್ನೋದು ಗೊತ್ತಿರಲಿಲ್ಲ. ಒಂದು ವೇಳೆ ಸೋಮಣ್ಣ ಅವರು ಪ್ರಚಾರಕ್ಕೆ ಕರೆದರೂ ಹೋಗುತ್ತೇನೆ ಎಂದು ಶಿವಣ್ಣ ಹೇಳಿದ್ದಾರೆ.

ಶಿವಣ್ಣ ಹೀಗೆ ಹೇಳುತ್ತಿದ್ದಂತೆ ಬಿಜೆಪಿ ನಾಯಕರು ತಮ್ಮ ವರಸೆ ಬದಲಿಸಿದ್ದಾರೆ. ನಿನ್ನೆ ಶಿವಣ್ಣ ವಿರುದ್ಧ ಆಕ್ರೋಶದಿಂದ ಟ್ವೀಟ್‌ ಮಾಡಿದ್ದ ಸಂಸದ ಪ್ರತಾಪ ಸಿಂಹ, ಇಂದು ನಾನು ಕೂಡಾ ಶಿವರಾಜ್‌ ಕುಮಾರ್‌ ಅಭಿಮಾನಿ ಎಂದು ಹೇಳಿದ್ದಾರೆ.

Share Post