Politics

ಚನ್ನಪಟ್ಟಣದಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ

ಬೆಂಗಳೂರು: ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಸಂಜೆ ಮನವಿ ಮಾಡಿದರು.

ಚನ್ನಪಟ್ಟಣದಲ್ಲಿ ಬೃಹತ್ ಜನಸಾಗರವಿದ್ದ ರೋಡ್ ಷೋದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಮಲ ಚಿಹ್ನೆಗೆ ಅಥವಾ ಜೆಡಿಎಸ್ ಚಿಹ್ನೆಗೆ ನೀವು ಮತ ನೀಡಿದರೆ ಅದು ನರೇಂದ್ರ ಮೋದಿಯವರಿಗೆ ನೇರವಾಗಿ ತಲುಪಲಿದೆ. 400ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಿಸಲು ಮೋದಿಜೀ ಅವರು ಸಂಕಲ್ಪ ಮತ್ತು ಆಶಯ ಹೊಂದಿದ್ದಾರೆ ಎಂದು ತಿಳಿಸಿದರು.

ದೇಶದ ಸುರಕ್ಷತೆ ಕಾಪಾಡಿದ ಮೋದಿಜೀ ಅವರು ಹಣಕಾಸಿನ ಕ್ಷೇತ್ರದಲ್ಲಿ 11ರಿಂದ 5ನೇ ಸ್ಥಾನಕ್ಕೆ ತಂದಿದ್ದಾರೆ. ಮುಂದೆ ಅದನ್ನು ಮೂರನೇ ಆರ್ಥಿಕ ಶಕ್ತಿಯಾಗಿ ಮಾಡಲಿದ್ದಾರೆ ಎಂದು ತಿಳಿಸಿದರು. ಕಾಂಗ್ರೆಸ್‍ಗೆ ಎಸ್‍ಡಿಪಿಐ ಬೆಂಬಲ ನೀಡಲಿದೆ ಎಂಬ ಮಾಹಿತಿ ಲಭಿಸಿದೆ. ಹಾಗಿದ್ದರೆ ಕರ್ನಾಟಕದ ಜನರು ಸುರಕ್ಷಿತವಾಗಿ ಇರಲು ಸಾಧ್ಯವೇ ಎಂದು ಪ್ರಶ್ನಿಸಿದರು.

ದೇಶವಿಡೀ ಮೋದಿಜೀ ಅವರ ಜೊತೆಗಿದೆ. ಕರ್ನಾಟಕದ ಜನತೆ ಮೋದಿಜೀ ಅವರ ಜೊತೆಗಿದೆ ಎಂಬುದನ್ನು ಇಂದಿನ ಈ ರೋಡ್ ಷೋ ಸಾಬೀತುಪಡಿಸಿದೆ ಎಂದು ಅವರು ನುಡಿದರು. ಡಾ. ಮಂಜುನಾಥ್ ಅವರು 5 ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಡಾ. ಮಂಜುನಾಥ್ ಅವರು ಸೇವಾಪರ ವೈದ್ಯರು ಎಂದ ಅವರು ಇಲ್ಲಿ ಡಾ.ಮಂಜುನಾಥ್ ಅವರನ್ನು ಗೆಲ್ಲಿಸಲು ಮನವಿ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಾ. ಮಂಜುನಾಥ್, ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮೊದಲಾದವರು ಭಾಗವಹಿಸಿದ್ದರು. ಬಿಜೆಪಿ- ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಹುರುಪು- ಉತ್ಸಾಹದಿಂದ ಪಾಲ್ಗೊಂಡಿದ್ದರು.

Share Post