National

ಹೆಣ್ಣು ಮಗಳ ಮದುವೆಗಾಗಿ ಕೂಡಿಟ್ಟ ಹಣ ಗೆದ್ದಲು ತಿಂದುಬಿಡ್ತು!

ಮಾನ್ಯಂ ( ಆಂಧ್ರಪ್ರದೇಶ; ಅವರದ್ದು ಕೂಲಿ ಮಾಡಿ ಜೀವನ ಮಾಡುವ ಕುಟುಂಬ. ಆ ಕುಟುಂಬದಲ್ಲಿ ಇಬ್ಬರು ಹೆಣ್ಣು ಮಗಳಿದ್ದಾರೆ. ಅದರಲ್ಲಿ ಹಿರಿಯ ಹೆಣ್ಣು ಮಗಳಿಗೆ ಚೆನ್ನಾಗಿ ಮದುವೆ ಮಾಡಿಕೊಡಬೇಕು ಅನ್ನೋದು ಕುಟುಂಬದ ಆಸೆಯಾಗಿತ್ತು. ಅದಕ್ಕಾಗಿ ಕೂಲಿ ಮಾಡಿದ್ದರಿಂದಾಗಿ ಬಂದ ಹಣವನ್ನು ಪೆಟ್ಟಿಗೆಯೊಂದರಲ್ಲಿ ಭದ್ರವಾಗಿ ಕೂಡಿಡುತ್ತಿದ್ದರು. ಆದ್ರೆ, ಗೆದ್ದಲು ಹುಳಗಳು ಆ ಕುಟುಂಬದ ಕನಸನ್ನು ನುಚ್ಚುನೂರು ಮಾಡಿವೆ. ಕೂಡಿಟ್ಟಿದ್ದ ಎಲ್ಲಾ ಹಣವನ್ನು ಚಿಂದಿ ಚಿಂದಿ ಮಾಡಿವೆ. 

ಈ ಘಟನೆ ನಡೆದಿರೋದು ಆಂಧ್ರಪ್ರದೇಶದ ಮಾನ್ಯಂ ಜಿಲ್ಲೆಯ  ಪಾರ್ವತಿಪುರಂ ಮಂಡಲದ ಪುತ್ತೂರಿನ ಆದಿಮೂಲಂ ಲಕ್ಷ್ಮಣ ರಾವ್ ಎಂಬುವವರ ಮನೆಯಲ್ಲಿ. ಲಕ್ಷ್ಮಣರಾವ್‌ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರು ತಮ್ಮ ಹಿರಿಯ ಮಗಳನ್ನು ಒಳ್ಳೆಯ ವರನಿಗೆ ಮದುವೆ ಮಾಡಿಕೊಡಬೇಕೆಂದು ಬಯಸಿದ್ದರು. ಇದಕ್ಕಾಗಿ ಮನೆಯಲ್ಲಿದ್ದ ಟ್ರಂಕ್‌ನಲ್ಲಿ ಕವರ್‌ನಲ್ಲಿ ಐನೂರು, ನೂರರ ನೋಟುಗಳನ್ನು ಕೂಡಿಡುತ್ತಿದ್ದರು. ಎರಡು ವರ್ಷದಿಂದ ಎರಡು ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಕೂಡಿಡಲಾಗಿತ್ತು.

ಆದ್ರೆ ಬಾಲಕಿಯರ ತಂದೆ ಲಕ್ಷ್ಮಣರಾವ್‌, ಮನೆಯ ಮೇಲಿಂದ ಕಾಲು ಜಾರಿ ಬಿದ್ದು ಐದು ತಿಂಗಳ ಹಿಂದೆ ಸಾವನ್ನಪ್ಪಿದ್ದಾರೆ. ಇತ್ತ ಲಕ್ಷ್ಮಣರಾವ್‌ ಮಗಲ ಮದುವೆಗೆ ಹಣ ಕೂಡಿಡುತ್ತಿದ್ದದ್ದು ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ಹೀಗಾಗಿ ಮನೆಯವರೂ ಇಷ್ಟು ದಿನ ದುಃಖದ ಹಿನ್ನೆಲೆಯಲ್ಲೇ ಬದುಕಿದ್ದರು. ಕೊನೆಗೆ ಇತ್ತೀಚೆಗೆ ಲಕ್ಷ್ಮಣರಾವ್‌ ಬಳಸುತ್ತಿದ್ದ ವಸ್ತುಗಳನ್ನು ಪರೀಕ್ಷಿಸಿದ್ದಾರೆ. ಅದೇ ರೀತಿ ಟ್ರಂಕ್‌ನ್ನು ಕೂಡಾ ತೆರೆದಿದ್ದಾರೆ. ಆಗ ಅದರಲ್ಲಿ ಗೆದ್ದಲು ಹುಳಗಳು ಐನೂರು ಹಾಗೂ ನೂರರ ನೋಟುಗಳನ್ನು ಚಿಂದಿ ಮಾಡಿರುವುದು ಕಂಡುಬಂದಿದೆ.

ಇದನ್ನು ನೋಡಿ ಲಕ್ಷಣರಾವ್‌ ಅವರ ತಂದೆ ತಾಯಿ ಕಣ್ಣೀರು ಹಾಕಿದ್ದಾರೆ.

Share Post