National

ತೆಲಂಗಾಣದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ; ಯುವಕನ ಬರ್ಬರ ಕೊಲೆ

ಹೈದರಾಬಾದ್; ತೆಲಂಗಾಣದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆದಿದೆ. ಪ್ರೀತಿಸಿ ಮದುವೆಯಾದ ಕಾರಣಕ್ಕಾಗಿ ಆಕ್ರೋಶಗೊಂಡ ವಧುವಿನ ಪೋಷಕರು, ಹುಡುಗನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹೈದರಾಬಾದ್‌ ನಗರದ ಸರೂರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿಎಚ್​ಎಂಸಿ ಕಚೇರಿ ರಸ್ತೆಯಲ್ಲಿ ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಈ ಕೃತ್ಯ ಎಸಗಲಾಗಿದೆ.

   ನಾಗರಾಜು ಎಂಬಾತನೇ ಕೊಲೆಯಾದ ಯುವಕ. ಈತ ರಂಗಾರೆಡ್ಡಿ ಜಿಲ್ಲೆಯ ಮಾರ್ಪಳ್ಳಿ ಗ್ರಾಮದವನು ಎಂದು ತಿಳಿದುಬಂದಿದೆ. ಕೊಲೆಯಾದ ನಾಗರಾಜು ಮಾರ್ಪಳ್ಳಿ ಸಮೀಪದ ಘನಾಪುರ ಗ್ರಾಮದ ಸೈಯದ್ ಅಶ್ರೀನ್ ಸುಲ್ತಾನಾ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದ. ಈ ಮದುವೆ ಎರಡೂ ಕುಟುಂಬಗಳಿಗೆ ಇಷ್ಟವಿರಲಿಲ್ಲ.

ನಾಗರಾಜ ಮತ್ತು ಅಶ್ರೀನ್​ ಸುಲ್ತಾನಾ 4 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದನ್ನು ತಿಳಿದ ಅಶ್ರಿನ್ ಕುಟುಂಬಸ್ಥರು ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ಅಶ್ರೀನ್ ಅವರನ್ನು ಮದುವೆಯಾಗಲು ನಿರ್ಧರಿಸಿದ ನಾಗರಾಜ್, ಕೆಲ ತಿಂಗಳ ಹಿಂದೆ ಹೈದರಾಬಾದ್‌ನ ಕಾರು ಕಂಪನಿಯೊಂದರಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸಕ್ಕೆ ಸೇರಿದ್ದರು. ಬಳಿಕ ಇಬ್ಬರೂ ಜನವರಿ 31 ರಂದು ಗೌಪ್ಯವಾಗಿ ಲಾಲ್ ದರ್ವಾಜಾದ ಆರ್ಯ ಸಮಾಜದಲ್ಲಿ ವಿವಾಹವಾಗಿದ್ದರು. ಬಳಿಕ ಹೈದರಾಬಾದ್​ನಲ್ಲಿ ರಹಸ್ಯವಾಗಿ ಜೀವನ ಸಾಗಿಸುತ್ತಿದ್ದರು. ಈ ವಿಷಯ ಯುವತಿಯ ಮನೆಯವರನ್ನು ಕೆರಳಿಸಿತ್ತು.

Share Post