Health

ಪ್ರಾದೇಶಿಕ ವಲಯಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಪ್ರಾರಂಭ :ಬೊಮ್ಮಾಯಿ

ಬೆಂಗಳೂರು: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಬೆಂಗಳೂರಿನ ಉತ್ತರಹಳ್ಳಿ ಆಯೋಜಿಸಲಾಗಿದ್ದ ಜನಜಾಗೃತಿ ಕಾರ್ಯಕ್ರಮವನ್ನು ಸಿಎಂ ಉದ್ಘಾಟಿಸಿದ್ರು. ಇದೇ ಸಂದರ್ಭದಲ್ಲಿ ‘ಆರೈಕೆಯ ಅಂತರವನ್ನು ಕಡಿತಗೊಳಿಸಿ’ ಎಂಬ ಘೋಷ ವಾಕ್ಯವನ್ನು ಬಿಡುಗಡೆ ಮಾಡಿದರು. ಜೊತೆಗೆ  ರಾಜ್ಯದ ಎಲ್ಲ ಪ್ರಾದೇಶಿಕ ವಲಯಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಿದ್ವಾಯಿ ಸಂಸ್ಥೆಯ ಆಧುನೀಕರಣಕ್ಕಾಗಿ ಎರಡು ಪೆಟ್ ಸ್ಕ್ಯಾನ್ ಮೆಷಿನ್ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಕ್ಯಾನ್ಸರ್ ರೋಗವನ್ನು ಪತ್ತೆಹಚ್ಚುವ ಪೆಟ್ ಸ್ಕ್ಯಾನ್ ಪರೀಕ್ಷೆ ಖಾಸಗಿ ಆಸ್ಪತ್ರೆಯಲ್ಲಿ 25,000 ರೂ.ಗಳವರೆಗೆ ವೆಚ್ಚವಾಗುತ್ತದೆ. ಬಡರೋಗಿಗಳಿಗೆ ಸಹಾಯ ಒದಗಿಸುವ ಉದ್ದೇಶದಿಂದ ಸರ್ಕಾರ ಈ ದುಬಾರಿ ಸ್ಕ್ಯಾನ್ ಸೌಲಭ್ಯವನ್ನು ಕೇವಲ 8 ರಿಂದ 10 ಸಾವಿರದೊಳಗೆ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ಔಷಧಿಗಳು ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಔಷಧಿಗಳನ್ನು ಲಭ್ಯವಾಗಿಸಲು ಸಂಬಂಧಪಟ್ಟ ತಯಾರಿಕಾ ಸಂಸ್ಥೆ ಹಾಗೂ ಕೇಂದ್ರ ಸರ್ಕಾರದ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಜನೌಷಧಿ ಕೇಂದ್ರಗಳಲ್ಲಿ ಕ್ಯಾನ್ಸರ್ ಔಷಧಿಗಳು ಸುಲಭ ದರದಲ್ಲಿ ದೊರಕಿಸಿಕೊಡಲು ಚಿಂತನೆ ನಡೆಸಲಾಗಿದೆ. ಇಡೀ ರಾಜ್ಯದಲ್ಲಿ ಅಗ್ಗ ದರದಲ್ಲಿ ಕ್ಯಾನ್ಸರ್ ಔಷಧಿಗಳನ್ನು ಪೂರೈಸುವ ಸೊಸೈಟಿಯನ್ನು ಸ್ಥಾಪಿಸುವ ಯೋಜನೆಯಿದೆ ಎಂದರು.

ಸಮೃದ್ಧ ಹಾಗೂ ಸದೃಢ ರಾಜ್ಯ ನಿರ್ಮಾಣವಾಗಲು ಆರೋಗ್ಯ ಕರ್ನಾಟಕ ಬಹಳ ಮುಖ್ಯ. ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ಹರಿಸಲಿದೆ. ಜನರನ್ನು ಸರ್ವರೀತಿಯಲ್ಲೂ ಸಶಕ್ತಗೊಳಿಸಿ ಕರ್ನಾಟಕದ ವಿಕಾಸದಲ್ಲಿ ಪಾಲುದಾರರಾಗುವಂತೆ ಮಾಡಲಾಗುವುದು. ಸಮುದಾಯ ಹಾಗೂ ಸರ್ಕಾರ ಒಟ್ಟುಗೂಡಿ ಕ್ಯಾನ್ಸರ್ ಪೀಡೆಯನ್ನು ಸಮಾಜದಿಂದ ದೂರವಾಗಿಸಬಹುದು. ಜಾಗೃತಿ ಅಭಿಯಾನ ಈ ಉದ್ದೇಶದ ಈಡೇರಿಕೆಗೆ ಪೂರಕವಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Share Post