CrimeDistricts

ಸಾಲ ವಸೂಲಾತಿಗೆ ಬಂದಿದ್ದಾತನ ಬೈಕ್‌ಗೆ ಬೆಂಕಿ ಇಟ್ಟ ಮಹಿಳೆಯರು..!

ಕೋಲಾರ; ಸ್ತ್ರೀಶಕ್ತ ಸಂಘಗಳಿಂದ ಪಡೆದ ಸಾಲವನ್ನು ಮನ್ನ ಮಾಡುತ್ತೇವೆ ಎಂದು ಚುನಾವಣೆ ವೇಳೆ ಕಾಂಗ್ರೆಸ್‌ ಆಶ್ವಾಸನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ಅವಾಂತರ ಸೃಷ್ಟಿಯಾಗುತ್ತಿವೆ. ಯಾರಾದರೂ ಸಾಲ ವಸೂಲಾತಿಗೆ ಬಂದರೆ ಅವರ ಮೇಲೆ ದಾಳಿಗಳಾಗುತ್ತಿವೆ. ಕೋಲಾರ ಜಿಲ್ಲೆಯಲ್ಲಿ ಇಂದು ಸಾಲ ವಸೂಲಾತಿಗೆ ಬಂದ ಬ್ಯಾಂಕ್‌ ನೌಕರನೊಬ್ಬನ ಬೈಕ್‌ಗೆ ಮಹಿಳೆಯರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಬಿಸ್ನಹಳ್ಳಿ ಗ್ರಾಮಕ್ಕೆ ಸ್ತ್ರೀಶಕ್ತಿ ಸಂಘದ ಸಾಲ ವಸೂಲಾತಿಗೆ ಡಿಸಿಸಿ ಬ್ಯಾಂಕ್ ನೌಕರನೊಬ್ಬ ಬಂದಿದ್ದ. ಈ ವೇಳೆ ನಾವು ಸಾಲ ಕಟ್ಟೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು ಬೈಕ್‌ಗೆ ಬೆಂಕಿ ಹಚ್ಚಿದ್ದಾರೆ. ಜೊತೆಗೆ ಸಿಬ್ಬಂದಿ ಮೇಲೆ ಮಹಿಳೆಯರೆಲ್ಲಾ ಸೇರಿ ಹಲ್ಲೆ ಕೂಡಾ ನಡೆಸಿದ್ದಾರೆ.

ಇನ್ನು ಬೈಕ್‌ ಬೆಂಕಿ ಹಚ್ಚಿದ್ದನ್ನು ಕಂಡ ಗ್ರಾಮದ ಗಂಡಸರು, ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ಇದರಿಂದಾಗಿ ಬೈಕ್‌ ಸಂಪೂರ್ಣ ಸುಡುವುದನ್ನು ತಪ್ಪಿಸಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ.

Share Post