CrimeDistricts

ರೀಲ್ಸ್‌ ಮಾಡುವಾಗ ನೀರಿಗೆ ಬಿದ್ದು ಸ್ನೇಹಿತರಿಬ್ಬರ ಸಾವು

ದಾವಣಗೆರೆ; ರೀಲ್ಸ್‌ ಮಾಡಲು ಹೋಗಿ ಚೆಕ್‌ ಡ್ಯಾಂಗೆ ಜಾರಿಬಿದ್ದು, ಇಬ್ಬರು ಸ್ನೇಹಿತರು ಸಾವನ್ನಪ್ಪಿರುವ ಘಟನೆ ಹರಿಹರ ತಾಲೂಕಿನ ಹರಗನಹಳ್ಳಿ ಬಳಿಯ ಚೆಕ್ ಡ್ಯಾಂನಲ್ಲಿ ನಡೆದಿದೆ.

 ಹರಿಹರದ ಆಶ್ರಯ ಬಡಾವಣೆ ಪವನ್ (25) ಹಾಗೂ ಪ್ರಕಾಶ್ (24) ನೀರುಪಾಲಾದ ಯುವಕರು. ಮೃತ ಪವನ್ ಹಾಗೂ ಪ್ರಕಾಶ್ ಸ್ನೇಹಿತರಾಗಿದ್ದು, ರೀಲ್ಸ್ ಮಾಡುವ ವೇಳೆ ದುರಂತ ಸಂಭವಿಸಿದೆ. ಆಕಸ್ಮಿಕವಾಗಿ ನೀರಿಗೆ ಬಿದ್ದ ಪ್ರಕಾಶ್​​ನನ್ನು ರಕ್ಷಿಸಲು ಸ್ನೇಹಿತ ಪವನ್ ಸಹ ನೀರಿಗಿಳಿದಿದ್ದು, ಇಬ್ಬರೂ ಕಣ್ಮರೆಯಾಗಿದ್ದರು.

ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದರೂ ಕೂಡ ಈ ವಿಚಾರ ಯಾರಿಗೂ ತಿಳಿದಿರಲಿಲ್ಲ. ಮೃತರೊಂದಿಗೆ ಹನುಮಂತ ಎಂಬ ಯುವಕ ಕೂಡ ಇದ್ದ. ಈ ಇಬ್ಬರೂ ನೀರಿಗೆ ಬಿದ್ದ ತಕ್ಷಣ ಹನುಮಂತ ಅವರನ್ನು ರಕ್ಷಿಸಲು ಯತ್ನಿಸಿ ವಿಫಲನಾಗಿದ್ದಾನೆ. ನಂತರ ಘಟನೆಯಿಂದ ಭಯಗೊಂಡು ಎರಡ್ಮೂರು ದಿನಗಳಿಂದ ತನಗೆ ಏನು ಗೊತ್ತೇ ಇಲ್ಲ ಎಂಬಂತಿದ್ದ ಎನ್ನಲಾಗಿದೆ.

ಪೊಲೀಸರು ಹನುಮಂತನನ್ನು ಕರೆದು ವಿಚಾರಣೆ ನಡೆಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.‌ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಮೃತದೇಹಕ್ಕಾಗಿ ಶೋಧ ನಡೆಸಿದಾಗ ಪ್ರಕಾಶ್ ಮೃತದೇಹ ಸಿಕ್ಕಿದೆ. ಪವನ್​ಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Share Post