CrimeDistrictsHealth

ವೈದ್ಯರಿಲ್ಲದಾಗ ಮಗುವಿಗೆ ಇಂಜೆಕ್ಷನ್‌ ನೀಡಿದ ನರ್ಸ್‌; ಮಗು ಸಾವು!

ಮಂಗಳೂರು; ವೈದ್ಯರು ಇಲ್ಲದ ವೇಳೆ ನರ್ಸ್‌ ಒಬ್ಬರು ಒಂದೂವರೆ ತಿಂಗಳ ಮಗುವಿಗೆ ಇಂಜೆಕ್ಷನ್‌ ಮಾಡಿದ್ದು, ಮಗು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಬೆಳ್ತಂಗಡಿಯ ಸರ್ಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ ಈ ಅಚಾತುರ್ಯ ನಡೆದಿದ್ದು, ಪೋಷಕರು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧರ್ಮಸ್ಥಳ ಗ್ರಾಮದ ಮುಳಿಕಾರ್‌ ನಿವಾಸಿ ಬಾಲಕೃಷ್ಣ ಹಾಗೂ ಸವಿತಾ ದಂಪತಿಯ ಪುತ್ರಿ ಅಂಶಿಕಾ ಎಂಬ ಒಂದೂವರೆ ತಿಂಗಳ ಮಗುವೇ ಸಾವನ್ನಪ್ಪಿರುವ ದುರ್ದೈವಿ. ಮಗುವಿಗೆ ಕಫ ಆಗಿದ್ದರಿಂದಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ನೀಡಲು ವೈದ್ಯರಿಲ್ಲದ ಕಾರಣ, ಅಲ್ಲಿದ್ದ ನರ್ಸ್‌ ಮಗುವಿಗೆ ಇಂಜೆಕ್ಷನ್‌ ಮಾಡಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ ಮಗು ಮೃತಪಟ್ಟಿದೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಮಾಜಿ ಶಾಸಕ ವಸಂತ ಬಂಗೇರ ಅವರು, ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ಕೂಡಾ ದಾಖಲಿಸಲಾಗಿದೆ.

 

Share Post