Districts

ಭಿಕ್ಷುಕನ ಬಳಿ ಇತ್ತು ಸಾವಿರ ಸಾವಿರ ಹಣ; ಗಾಂಜಾ ಮಾರಾಟ ಆರೋಪ!

ತುಮಕೂರು; ಭಿಕ್ಷುಕನೊಬ್ಬ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂದು ಸ್ಥಳೀಯರು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಹಿಡಿದು ಪರಿಶೀಲನೆ ಮಾಡಿದಾಗ ಆತನ ಬಳಿ ಸಾವಿರ ಸಾವಿರ ರೂಪಾಯಿ ಹಣ ಸಿಕ್ಕಿದೆ. ಈ ಘಟನೆ ನಡೆದಿರೋದು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಸಿದ್ಧರಬೆಟ್ಟದ ಸಮೀಪವಿರುವ ಮರೇನಾಯಕನಹಳ್ಳಿ ಗ್ರಾಮದಲ್ಲಿ. ಇಲ್ಲಿನ ಬಸ್‌ ನಿಲ್ದಾಣದಲ್ಲಿ ಭಿಕ್ಷುಕನೊಬ್ಬ ಇದ್ದ. ಆತ ಗಾಂಜಾ ಮಾರುತ್ತಿದ್ದಾನೆ ಎಂದು ಕೆಲವರು ಆರೋಪ ಮಾಡಿದ್ದರು. ಪೊಲೀಸರಿಗೂ ಮಾಹಿತಿ ನೀಡಿದ್ದರು.

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಬಂದು ತಪಾಸಣೆ ಮಾಡಿದ್ದಾರೆ. ಭಿಕ್ಷುಕನ ಬಳಿ ಇದ್ದ ಬಟ್ಟೆಯ ಗಂಟನ್ನು ಬಿಚ್ಚಿದ್ದಾರೆ. ಈ ವೇಳೆ 20 ಸಾವಿರ ರೂಪಾಯಿ ಚಿಲ್ಲರೆ ಹಾಗೂ 30 ಸಾವಿರ ರೂಪಾಯಿ ಬೆಲೆಯ ನೋಟುಗಳು ಸಿಕ್ಕಿವೆ. ಆದ್ರೆ ಗಾಂಜಾ ಆಗಲೀ ಯಾವುದೇ ರೀತಿಯ ಮಾದಕ ವಸ್ತುವಾಗಲೀ ಆತನ ಬಳಿ ಪತ್ತೆಯಾಗಿಲ್ಲ.

ಈ ಭಿಕ್ಷುಕ ಮರೇನಾಯಕನಹಳ್ಳಿ, ಸಿದ್ದರಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಿಕ್ಷೆ ಬೇಡಿಕೊಂಡಿದ್ದನು. ಆತನ ಚಲನವಲನದಿಂದ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು ಎನ್ನಲಾಗಿದೆ.

 

Share Post