CrimeDistricts

ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದ ಸಾವು!

ಮೈಸೂರು; ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.. ಇಲ್ಲಿನ ಯರಗನಹಳ್ಳಿಯಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಗಂಡ-ಹೆಂಡತಿ ಹಾಗೂ ವಯಸ್ಸಿಗೆ ಬಂದ ಇಬ್ಬರು ಹೆಣ್ಣುಮಕ್ಕಳು ಸಾವನ್ನಪ್ಪಿದ್ದಾರೆ..

45 ವರ್ಷದ ಕುಮಾರಸ್ವಾಮಿ, ಅವರ ಪತ್ನಿ 39 ವರ್ಷದ ಮಂಜುಳಾ, ಮಕ್ಕಳಾದ 19 ವರ್ಷದ ಅರ್ಚನಾ ಹಾಗೂ 17 ವರ್ಷದ ಸ್ವಾತಿ ಸಾವನ್ನಪ್ಪಿದವರು.. ಮನೆಯಲ್ಲಿ ಮಲಗುವಾಗ ಎಲ್ಲಾ ಕಿಟಕಿ, ಬಾಗಿಲುಗಳನ್ನು ಮುಚ್ಚಲಾಗಿತ್ತು.. ಈ ವೇಳೆ ಅಡುಗೆ ಅನಿಲ ಸೋರಿಕೆಯಾಗಿ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ..  ಕುಮಾರಸ್ವಾಮಿ ಕುಟುಂಬಸ್ಥರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಕ್ಕರಾಯನ ಪಟ್ಟಣ ಮೂಲದವರು. ಆದ್ರೆ 30 ವರ್ಷಗಳಿಂದ ಮೈಸೂರು ಜಿಲ್ಲೆಯ ಯರಗನಹಳ್ಳಿಯಲ್ಲಿ ವಾಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ..

ಇವರು ಬಟ್ಟೆ ಐರನ್‌ ಕೆಲಸ ಮಾಡುತ್ತಿದ್ದು, ಇದಕ್ಕೆ ಗ್ಯಾಸ್‌ ಸಿಲಿಂಡರ್‌ ಬಳಸುತ್ತಿದ್ದರು ಎಂದು ತಿಳಿದುಬಂದಿದೆ..  10 ಅಡಿ ಉದ್ದ, 20 ಅಡಿ ಅಗಲದ ಚಿಕ್ಕ ಮನೆಯಲ್ಲಿ ಗಾಳಿ ಹೊರಗೆ ಹೋಗಲು ಅವಕಾಶ ಇಲ್ಲ. ಹೀಗಾಗಿ ಆ ಸಿಲಿಂಡರ್ ಸೋರಿಕೆಯಿಂದ ಉಸಿರುಗಟ್ಟಿ ನಾಲ್ವರೂ ಮಲಗಿದಲ್ಲಿಯೇ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ..

ಸದ್ಯ ಮೈಸೂರಿ‌ನ ಜೆಎಸ್‌ಎಸ್ ಶವಗಾರಕ್ಕೆ ಮೃತದೇಹಗಳನ್ನು ರವಾನೆ ಮಾಡಲಾಗಿದೆ. ಗಂಡ ಕುಮಾರಸ್ವಾಮಿ, ಪತ್ನಿ ಮಂಜುಳಾ, ಮಗಳು ಅರ್ಚನಾ ಹಾಗೂ ಸ್ವಾತಿಯನ್ನು ನೆನೆದು ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ.

Share Post