Districts

ಮುಂದುವರಿದ ಶಾಸಕ-ಸಂಸದರ ಕಿತ್ತಾಟ; ಪ್ರತಾಪ ಸಿಂಹ ಕೋಪ ತಾಪ

ಮೈಸೂರು: ಕೇಂದ್ರ ಸರ್ಕಾರದ ಯೋಜನೆ ಮೂಲಕ ಮೈಸೂರಿನ ಮನೆ ಮನೆಗೆ ಗ್ಯಾಸ್ ಪೈಪ್ ಲೈನ್ ಸಂಪರ್ಕ ಕಲ್ಪಿಸುವ ಯೋಜನೆ ವಿಚಾರವಾಗಿ ಬಿಜೆಪಿ ಸ್ಥಳೀಯ ನಾಯಕರ ಕಿತ್ತಾಟ ಮುಂದುವರೆದಿದೆ. ಶಾಸಕರಾದ ಎಸ್‌.ಎ.ರಾಮದಾಸ್‌ ಹಾಗೂ ನಾಗೇಂದ್ರ ಅವರು ಗ್ಯಾಸ್‌ ಪೈಪ್‌ ಲೈನ್‌ ಅಳವಡಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಸಂಸದ ಪ್ರತಾಪ ಸಿಂಹ ಆ ಇಬ್ಬರು ಶಾಸಕರಿಗೂ ತಿರುಗೇಟು ನೀಡುತ್ತಿದ್ದಾರೆ.

ಈ ಬಗ್ಗೆ ಇಂದು ಮಾತನಾಡಿರುವ ಸಂಸದ ಪ್ರತಾಪ ಸಿಂಹ, ಹುಟ್ಟಿ ಬೆಳೆದ ಕ್ಷೇತ್ರದಲ್ಲೇ ಹೆಚ್ಚು ಓಟ್ ಪಡೆಯಲು ಸಾಧ್ಯವಿಲ್ಲದ ಶಾಸಕ ನಾಗೇಂದ್ರ ನನ್ನ ಹೇಗೆ ಗೆಲ್ಲಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಮೈಸೂರಿನ ಚಾಮರಾಜ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ 300 ಕೋಟಿ ತಂದಿದ್ದೇನೆ ಅಂತಾರೆ. ಆದರೆ 4 ವರ್ಷಕ್ಕೆ ಈಗ ಬಿಡುಗಡೆ ಆಗಿರುವುದೇ 50 ಕೋಟಿ ರೂಪಾಯಿ. ಹೀಗಿರುವ ಉಳಿದ ಹಣ ಎಲ್ಲಿಂದ ತಂದಿದ್ದಾರೆ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಈ ಯೋಜನೆ ಇಷ್ಟವಾಗದಿದ್ದರೆ ರಾಮದಾಸ್ ಹಾಗೂ ನಾಗೇಂದ್ರ ಅವರು ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಿ ನೋಡೋಣ ಎಂದ ಪ್ರತಾಪ್ ಸಿಂಹ, ತಮ್ಮದೇ ಪಕ್ಷದ ಶಾಸಕರ ವಿರುದ್ಧ ಕಿಡಿಕಾರಿದ್ದಾರೆ. ನನ್ನ ವಿರುದ್ಧ ಆರೋಪ ಮಾಡಿದ ಶಾಸಕರ ಕ್ಷೇತ್ರಗಳಲ್ಲಿ ಅವರು ಗಳಿಸಿದ ಮತಗಳಷ್ಟು ನನಗೆ ಲೀಡ್‌ ಬಂದಿದೆ ಎಂದು ಇದೇ ಸಂದರ್ಭದಲ್ಲಿ ಪ್ರತಾಪ ಸಿಂಹ ಹೇಳಿದ್ದಾರೆ.

Share Post