CrimeDistricts

ವಾಸ್ಕೋ ಬಳಿ ಭೀಕರ ಅಪಘಾತ; ಕಾರವಾರದ ಒಂದೇ ಕುಟುಂಬದ ಮೂವರ ದುರ್ಮರಣ

ವಾಸ್ಕೋ; ಗೋವಾದ ಬಳಿ ವಾಸ್ಕೋದಲ್ಲಿ ನಡೆದ ಭೀಕರ ರಸ್ತೆ ದುರಂತದಲ್ಲಿ ಕಾರವಾರದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.  ದೇವರ ದರ್ಶನ ಮುಗಿಸಿ ವಾಪಸ್​ ಆಗುತ್ತಿದ್ದ ಕಾರೊಂದು ಭೀಕರ ಅಪಘಾತಗೊಂಡು ಈ ದುರ್ಘಟನೆ ನಡೆದಿದೆ.  ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮೃತರು ಕಾರವಾರ ತಾಲೂಕಿನ ಮಾಜಾಳಿ ಮೂಲದವರಾಗಿದ್ದಾರೆ. ಉಲ್ಲಾಸ್ ಸೇರಿದಂತೆ ಅವರ ಕುಟುಂಬದ ಒಟ್ಟು ಎಂಟು ಸದಸ್ಯರು ಕಾರಿನಲ್ಲಿ ವಾಸ್ಕೋದಿಂದ ಕಾರವಾರದ ಹಣಕೋಣದಲ್ಲಿರುವ ಸಾತೇರಿ ದೇವಿಯ ದರ್ಶನಕ್ಕೆ ಬಂದಿದ್ದರು. ದೇವಿ ದರ್ಶನ ಪಡೆದು ಬಳಿಕ ವಾಸ್ಕೋಗೆ ವಾಪಸ್​ ತೆರಳುತ್ತಿದ್ದರು. ಈ ವೇಳೆ ಗೋವಾದ ಕಾಣಕೋಣದ ಮನೋಹರ್ ಪರಿಕ್ಕರ್ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್​ನಲ್ಲಿ ಭೀಕರ ಅಪಘಾತ ಸಂಭವಿಸಿದೆ.

ಮಡ್ಗಾಂವ್​ನಿಂದ ಅತಿವೇಗದಲ್ಲಿ ಬಂದ ಕಾರೊಂದು ಡಿವೈಡರ್​ಗೆ ಡಿಕ್ಕಿ ಹೊಡೆದು ಬಲ ಭಾಗದಲ್ಲಿ ಬರುತ್ತಿದ್ದ ಉಲ್ಲಾಸ್ ಅವರ ಕುಟುಂಬವಿದ್ದ ಕಾರಿಗೆ ಎದುರಿನಿಂದ ಗುದ್ದಿದೆ. ಈ ಭೀಕರ ಅಪಘಾತದಲ್ಲಿ ಉಲ್ಲಾಸ ನಾಗೇಕರ್, ಅವರ ಪತ್ನಿ ವೀಣಾ ನಾಗೇಕರ್ ಹಾಗೂ ಅವರ ಪುತ್ರ ಹರೀಶ್ ನಾಗೇಕರ್ ಮೃತಪಟ್ಟಿದ್ದಾರೆ.

Share Post