Districts

ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿಗೆ ಜೀವ ಬೆದರಿಕೆ

ಶಿವಮೊಗ್ಗ; ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿಗೆ ವ್ಯಕ್ತಿಯೊಬ್ಬ ಜೀವಬೆದರಿಕೆ ಹಾಕಿದ್ದಾನೆ. ರಾಜನಂದಿನಿ ಅವರಿಗೆ ಸೇರಿದ ಕಾರನ್ನು ಅಡ್ಡಗಟ್ಟಿದ ವ್ಯಕ್ತಿಯೊಬ್ಬ ಡಾ.ರಾಜನಂದಿನಿ ಅವರನ್ನು ಕೊಲೆ ಮಾಡುವುದಾಗಿ ರಾಜನಂದಿನಿ ಬೆಂಬಲಿಗರ ಮುಂದೆ ಎಚ್ಚರಿಕೆ ಸಂದೇಶ ರವಾನಿಸಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಗೋಡು ತಿಮ್ಮಪ್ಪ ಅವರಿಗೆ ವಯಸ್ಸಾಗಿರುವುದರಿಂದ ರಾಜಕೀಯದಿಂದ ದೂರ ಇದ್ದಾರೆ. ಹೀಗಾಗಿ ಅವರ ಪುತ್ರಿ ಡಾ.ರಾಜನಂದಿನಿ ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಅವರು, ಆರೋಗ್ಯ ಶಿಬಿರಗಳ ಮೂಲಕ ಜನರಿಗೆ ಹತ್ತಿರವಾಗುತ್ತಿದ್ದಾರೆ. ಮೇ 2 ರಂದು ಕೂಡಾ ಸಾಗರ ಕ್ಷೇತ್ರದ ತ್ಯಾಗರ್ತಿ ಗ್ರಾಮದಲ್ಲಿ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು. ಡಾ.ರಾಜನಂದಿನಿ ಕಾಗೋಡು ಅವರು ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಸಾಗರಕ್ಕೆ ಹಿಂತಿರುಗುತ್ತಿದ್ದಾಗ ಯುವಕನೊಬ್ಬ ಡಾ. ರಾಜನಂದಿನಿ ಅವರಿಗೆ ಸೇರಿದ ಕಾರು ಅಡ್ಡಗಟ್ಟಿದ್ದಾನೆ.

ರಾಜನಂದಿನಿ ಅವರು ವೃತ್ತಿಯಲ್ಲಿ ವೈದ್ಯರು. ಹೀಗಾಗಿ ಇಷ್ಟು ದಿನ ಅವರು ರಾಜಕೀಯದಲ್ಲಿ ಸಕ್ರಿಯರಾಗಿರಲಿಲ್ಲ.. ಇದೀಗ ಅವರ ತಂದೆಯ ವರ್ಚಸ್ಸನ್ನು ಬಳಸಿಕೊಂಡು ಕಾಂಗ್ರೆಸ್‌ ಟಿಕೆಟ್‌ ಮೂಲಕ ಗೆಲ್ಲಲು ಕಸರತ್ತು ಮಾಡುತ್ತಿದ್ದಾರೆ. ಇದರ ವೈಷಮ್ಯದಿಂದಲೋ ಏನೋ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ. ಆದ್ರೆ ಕಾರಿನಲ್ಲಿ ಡಾ.ರಾಜನಂದಿನಿ ಇರಲಿಲ್ಲ. ರಾಜನಂದಿನಿ ಬೇರೊಂದು ಕಾರಿನಲ್ಲಿ ಪ್ರಯಾಣಿಸಿದ್ದಾರೆ. ರಾಜನಂದಿನಿ ಕಾರಿನಲ್ಲಿ ಅವರ ಬೆಂಬಲಿಗರು ಮಾತ್ರ ಇದ್ದರು. ಅದನ್ನು ತಿಳಿಯದ ವ್ಯಕ್ತಿ ಕಾರನ್ನು ಅಡ್ಡಗಟ್ಟಿದ್ದಾನೆ. ರಾಜನಂದಿನಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಾರಿನ ಚಾಲಕನ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.

Share Post