CrimeDistricts

ಕೊಲೆ ಆರೋಪಿಯಿಂದ ಮಹಿಳಾ ಪಿಎಸ್‌ಐ ಮೇಲೆ ಗುಂಡಿನ ದಾಳಿ

ಕಲಬುರಗಿ; ಸ್ಥಳ ಮಹಜರು ವೇಳೆ ಕೊಲೆ ಆರೋಪಿಯೊಬ್ಬ ಮಹಿಳಾ ಪಿಎಸ್‌ಐ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಕಲಬುರಗಿ ಜಿಲ್ಲೆ ಶಹಾಬಾದ್‌ ಬಳಿ ನಡೆದಿದೆ. ಘಟನೆಯಲ್ಲಿ ಶಹಾಬಾದ್‌ ಪಿಎಸ್‌ಐ ಸುವರ್ಣ ಅವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯವಾಗಿರುವುದರಿಂದ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಶಹಾಬಾದ್ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ‌ಕಂಬಾನೂರ ಕೊಲೆ ಆರೋಪಿ ವಿಜಯ್‌ ಕುಮಾರ್‌ ಹಳ್ಳಿ ಎಂಬಾತನೇ ಗುಂಡು ಹಾರಿಸಿರುವ ಆರೋಪಿ. ಕೆಲ ದಿನಗಳ ಹಿಂದೆ ಗಿರೀಶ್ ಕಂಬಾನೂರ ಅವರನ್ನು ಎರಡು ತಲ್ವಾರ್‌ಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ನಿನ್ನೆ ತಡ ರಾತ್ರಿ ಆರೋಪಿ ವಿಜಯಕುಮಾರ್ ಹಳ್ಳಿ ಹಾಗೂ ಇತರರನ್ನು ಬಂಧಿಸಲಾಗಿತ್ತು. ಶಹಾಬಾದ್ ಬಳಿಯ ತೊನಸನಹಳ್ಳಿ ಗ್ರಾಮದ ಬಳಿ ತಲ್ವಾರ್ ಹಾಗೂ ಬಂದೂಕು ಎಸೆದಿದ್ದೇವೆ ಎಂದು ಆರೋಪಿಗಳು ಹೇಳಿದ್ದರು. ಹೀಗಾಗಿ ಆರೋಪಿಗಳನ್ನು ಪಂಚನಾಮೆಗಾಗಿ ಆ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಎಸೆದಿದ್ದ ಸ್ಥಳವನ್ನು ತೋರಿಸುವ ನಟನೆ ಮಾಡಿದ ವಿಜಯಕುಮಾರ್ ಹಳ್ಳಿ ಅದೇ ಬಂದೂಕಿನಿಂದ ಸುವರ್ಣಾ ಅವರತ್ತ ಗುಂಡು ಹಾರಿಸಿದ್ದಾ‌ನೆ. ತಕ್ಷಣ ಎಚ್ಚೆತ್ತ ಸಿಪಿಐ ಪ್ರಕಾಶ್ ಯಾತನೂರ ವಿಜಯಕುಮಾರ್ನತ್ತಲೂ ಗುಂಡು ಹಾರಿಸಿದರು.

ಆರೋಪಿ ವಿಜಯ್‌ಕುಮಾರ್‌ ಹಳ್ಳಿಗೆ ಕೂಡಾ ಗಾಯಗಳಾಗಿದ್ದು, ಆತ ಕೂಡಾ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

 

Share Post