DistrictsPolitics

ದರ್ಶನ್‌ ಪುಟ್ಟಣ್ಣಯ್ಯ ನಾಮಪತ್ರ ಸಲ್ಲಿಕೆ; ನಟ ದರ್ಶನ್‌ ರೋಡ್‌ ಶೋ

ಪಾಂಡವಪುರ; ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಹಾಗೂ ರೈತಸಂಘ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರು ಪಾಂಡವಪುರದಲ್ಲಿ ಅದ್ದೂರಿ ಜನಸಾಗರ ನಡುವೆ ಮೆರವಣಿಗೆ ನಡೆಸಿ, ನಂತರ ಪಾಂಡವಪುರ ತಾಲೂಕು ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರು ರೈತಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಾಥ್ ನೀಡಿ, ಮೆರವಣಿಗೆಯಲ್ಲಿ ಪಾಲ್ಗೊಂಡು, ದರ್ಶನ್ ಪುಟ್ಟಣ್ಣಯ್ಯ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು. ನಟ ದರ್ಶನ್ ತೂಗುದೀಪ್ ಆಗಮಿಸಿದ್ದು ರೈತಸಂಘ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ತಂದುಕೊಟ್ಟಿತು. ಜೊತೆಗೆ ಜೈಕಾರ ಘೋಷಣೆ‌ ಮೊಳಗಿತು.

ಪಾಂಡವಪುರ ಪಟ್ಟಣದಲ್ಲಿ ರೈತಸಂಘ, ಕಾಂಗ್ರೆಸ್ ಪಕ್ಷದ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರು ಪಟ್ಟಣದ ತಾಲೂಕು ಕಚೇರಿಯ ಚುನಾವಣಾಧಿಕಾರಿ ವಿಕ್ರಮ್ ರಾಜ್ ಅರಸ್ ಅವರಿಗೆ ನಾಮಪತ್ರ ಸಲ್ಲಿಸಿದರು. ಪಟ್ಟಣದ ಕೆಎಸ್ಆರ್ ಟಿಸಿ ಡಿಪ್ಪೊ ಬಳಿ ಜಮಾಯಿಸಿದ ಮೈತ್ರಿ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್, ರೈತಸಂಘದ ಬಾವುಟದೊಂದಿಗೆ ಜನಸಾಗರ ನಡುವೆ ಮೆರವಣಿಗೆ ನಡೆಸಿದರು. ಮೇರವಣಿಗೆಯಲ್ಲಿ ಸಂಸದೆ ಸುಮಲತಾ ಅಂಬರೀಶ್, ನಟ ದರ್ಶನ್, ಅಂಬರೀಶ್ ಪುತ್ರ ಅಭಿಷೇಕ್ ಫೋಟೊ ರಾರಾಜಿಸುತ್ತಿದ್ದ ದೃಶ್ಯ ಕಂಡು ಬಂದಿತು.

ದಾರಿಯುದ್ದಕ್ಕೂ ದರ್ಶನ್ ಗೆ ಜಯವಾಗಲಿ, ಈ ಬಾರಿ ದರ್ಶನ್ ಪುಟ್ಟಣ್ಣಯ್ಯ ಗೆಲುವು ಎಂದು ಘೋಷಣೆ ಕೂಗಿ, ಸಂಭ್ರಮಿಸಿದರು. ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್ ಪಕ್ಷದ ನಾಯಕರು ಸಾಥ್ ನೀಡಿದರು.

Share Post