CrimeDistricts

ದನಗಳ ಮೈತೊಳೆಯಲು ಹೋಗಿದ್ದ ರೈತ ನೀರುಪಾಲು

ದೊಡ್ಡಬಳ್ಳಾಪುರ; ದನಗಳಿಗೆ ಮೈತೊಳೆಯುವಾಗ ರೈತನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರದ ಬಳಿ ನಡೆದಿದೆ. ಒಡೇರಹಳ್ಳಿ ಬಳಿಯ ಜಾಲಿ ಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಮೃತ ರೈತನನ್ನು ರಾಮಪುರ ಗ್ರಾಮದ ಕುಮಾರ್‌ ಎಂದು ಗುರುತಿಸಲಾಗಿದೆ.

ಕುಮಾರ್‌ ಅವರು ಜಾಲಿಕಟ್ಟೆಯಲ್ಲಿ ದನಗಳ ಮೈತೊಳೆಯೋದಕ್ಕೆ ಅಂತ ಹೋಗಿದ್ದರು. ನೀರಿಗಿಳಿದು ದನಗಳ ಮೈತೊಳೆಯುತ್ತಿದ್ದರು. ಆದ್ರೆ ನೀರಿನ ಆಳ ಅವರಿಗೆ ಗೊತ್ತಿರಲಿಲ್ಲ. ಹೀಗಾಗಿ ಕಾಲು ಜಾರಿಬಿದ್ದು ಸಾವನ್ನಪ್ಪಿದ್ದಾರೆ. ಆದ್ರೆ ಮಧ್ಯಾಹ್ನ ದನಗಳಿಗೆ ಮೈತೊಳೆಯಲು ಹೋದ ಕುಮಾರ್‌ ವಾಪಸ್‌ ಬರದಿದ್ದಕ್ಕೆ ಕುಟುಂಬದವರು ಆತಂಕಗೊಂಡಿದ್ದರು. ಈ ನಡುವೆ ದನಗಳ ಮಾತ್ರ ಮನೆಗೆ ಬಂದಿದ್ದವು.

ಇದರಿಂದ ಮತ್ತಷ್ಟು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಹೋಗಿ ಹುಡುಕಾಟ ನಡೆಸಿದಾಗ ಕುಮಾರ್‌ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ಗೊತ್ತಾಗಿದೆ. ಮೃತ ಕುಮಾರ್‌ಗೆ ಮೂರು ವರ್ಷದ ಹಿಂದೆಯಷ್ಟೇ ಮದುವೆಯಾಗಿತ್ತು ಎಂದು ತಿಳಿದುಬಂದಿದೆ.

 

Share Post