Districts

ಹಿಜಾಬ್‌ ಪರವಾಗಿ ಕಾಲೇಜುಗಳು ಗೋಡೆಗಳ ಮೇಲೆ ಬರಹ; ಹೊಸಪೇಟೆಯಲ್ಲಿ 4 ಪ್ರಕರಣ ದಾಖಲು

ವಿಜಯನಗರ: ಹೊಸಪೇಟೆಯ ಪ್ರೌಢಶಾಲೆ, ಕಾಲೇಜುಗಳ ಗೋಡೆಗಳ ಮೇಲೆ ಹಿಜಾಬ್‌ ಧರಿಸುವುದನ್ನು ಸಮರ್ಥಿಸಿಕೊಂಡು ಬರೆದ ಬರಹಕ್ಕೆ ಸಂಬಂಧಿಸಿ ಮೂರು ಠಾಣೆಗಳಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ‘ಹಿಜಾಬ್ ಇಸ್‌ ಅವರ್‌ ಡಿಗ್ನಿಟಿ’, ‘ಹಿಜಾಬ್‌ ಇಸ್‌ ಅವರ್‌ ರೈಟ್‌’ ಎಂದು ಇಂಗ್ಲಿಷ್‌ನಲ್ಲಿ ದೊಡ್ಡ ಅಕ್ಷರಗಳಲ್ಲಿ ಗೋಡೆಗಳ ಮೇಲೆ ಬರೆಯಲಾಗಿತ್ತು.

ವಿಜಯನಗರ ಕಾಲೇಜು, ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗೋಡೆಗಳ ಮೇಲೆ ಬರೆದ ಬರಹಕ್ಕೆ ಸಂಬಂಧಿಸಿ ಆ ಕಾಲೇಜಿನ ಪ್ರಾಂಶುಪಾಲರು ನೀಡಿರುವ ದೂರಿನ ಮೇರೆಗೆ ಗ್ರಾಮೀಣ ಮತ್ತು ಚಿತ್ತವಾಡ್ಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಶಾಲೆಯ ಗೋಡೆಗಳ ಮೇಲೆ ಬರೆದ ಬರಹದ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಲ್ಲದೇ ನಗರದ ಜಿಲ್ಲಾ ಕ್ರೀಡಾಂಗಣದ ಗೋಡೆಗಳು, ಹರಿಹರ ರಸ್ತೆಯ ಗುರು ಪದವಿಪೂರ್ವ ಕಾಲೇಜಿನ ಗೋಡೆಗಳ ಮೇಲೆಯೂ ಹಿಜಾಬ್‌ ಬೆಂಬಲಿಸಿ ಬರಹ ಬರೆಯಲಾಗಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ನಗರಸಭೆ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಗೋಡೆ ಬರಹಗಳ ಮೇಲೆ ಸುಣ್ಣ, ಬಣ್ಣ ಬಳಿಸಿದ್ದಾರೆ.

Share Post