CrimeDistricts

ದುಷ್ಮನ್‌ನನ್ನು ಸಿಲುಕಿಸಲು ಸ್ನೇಹಿತನನ್ನೇ ಕೊಲೆ ಮಾಡಿದ ಯುವಕ..!

ಮೈಸೂರು; ತನ್ನ ದುಷ್ಮನ್‌ ಮೇಲೆ ಕೊಲೆ ಆರೋಪ ಬಂದು ಜೈಲು ಸೇರಲಿ ಅನ್ನೋ ಕಾರಣಕ್ಕೆ ಯುವಕನೊಬ್ಬ ಸ್ನೇಹಿತನನ್ನೇ ಕೊಲೆ ಮಾಡಿ ನಾಟಕವಾಡಿ ಸಿಕ್ಕಿಬಿದ್ದಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಎಚ್‌.ಡಿ.ಕೋಟೆ ತಾಲ್ಲೂಕಿನ ನೇರಳೆಹುಂಡಿ ಗ್ರಾಮದಲ್ಲಿ ಇಂತಹದ್ದೊಂದು ಅಮಾನುಷ ಘಟನೆ ನಡೆದಿದೆ.

ಇತ್ತೀಚೆಗೆ ಇದೇ ಗ್ರಾಮದ ಭಾನುಪ್ರಕಾಶ ಎಂಬಾತನ ಕೊಲೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೊದಲು ಆರು ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಅವರ ವಶಕ್ಕೆ ಪಡೆಯಲು ಕಾರಣ ಈ ಹಿಂದೆ ಆಗಿದ್ದ ಗಲಾಟೆ. ಕೊಲೆಯಾದ ಭಾನುಪ್ರಕಾಶ್‌ ಈ ಹಿಂದೆ ಎನ್‌.ಪ್ರಕಾಶ್‌ ಎಂಬಾತನ ಪತ್ನಿಗೆ ಮೆಸೇಜ್‌ ಮಾಡಿದ್ದ. ಈ ವಿಷಯ ತಿಳಿದ ಪ್ರಕಾಶ್‌ ಕೋಪಗೊಂಡು ಭಾನುಪ್ರಕಾಶ್‌ ಮೇಲೆ ಎಗರಾಡಿದ್ದ. ಇದೇ ದ್ವೇಷದಿಂದ ಭಾನುಪ್ರಕಾಶ್‌ನನ್ನು ಪ್ರಕಾಶ್‌ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಆದ್ರೆ ವಿಚಾರಣೆ ವೇಳೆ ಭಾನುಪ್ರಕಾಶ್‌ಗೂ ಆ ಕೊಲೆಗೂ ಸಂಬಂಧವೇ ಇಲ್ಲ ಅನ್ನೋದು ಬಯಲಾಗಿದೆ.

ಭಾನುಪ್ರಕಾಶ್‌ ಕೊಲೆಯಾದ ಪ್ರದೇಶದಲ್ಲಿ ಬಳಕೆಯಾದ ಮೊಬೈಲ್‌ ಸಂಖ್ಯೆಗಳ ಆಧಾರದ ಮೇಲೆ ಪೊಲೀಸರು ನಿಜವಾದ ಆರೋಪಿಯನ್ನು ಬಂಧಿಸಿದ್ದಾರೆ. ಅಂದಹಾಗೆ ಭಾನುಪ್ರಕಾಶ್‌ನನ್ನು ಕೊಲೆ ಮಾಡಿದ್ದು ಆತನ ಸ್ನೇಹಿತನೇ ಆದ ದಿನೇಶ್‌. ಭೀಮ ಎಂಬಾತನ ಜೊತೆ ಸೇರಿ ದಿನೇಶ್‌ ಭಾನುಪ್ರಕಾಶ್‌ನ ಕತ್ತು ಸೀಳಿ ಕೊಲೆ ಮಾಡಿದ್ದ. ಈ ಹಿಂದೆ ಗಲಾಟೆಯಾಗಿದ್ದ ಪ್ರಕಾಶ್‌ ಮೇಲೆ ಈ ಆರೋಪ ಬರುತ್ತೆ. ಆತನ ಜೈಲಿಗೆ ಹೋಗುತ್ತಾನೆ ಎಂದು ದಿನೇಶ್‌ ಭಾವಿಸಿದ್ದ.

ಅಂದಹಾಗೆ, ಪ್ರಕಾಶ್‌ ಅಂದ್ರೆ ಮೊದಲಿನಿಂದಲೂ ದಿನೇಶ್‌ಗೆ ಆಗುತ್ತಿರಲಿಲ್ಲ. ಇನ್ನು ಇದೇ ವೇಳೆ ಭಾನುಪ್ರಕಾಶ್‌, ಪ್ರಕಾಶ್‌ ಪತ್ನಿಗೆ ಮಸೇಜ್‌ ಮಾಡಿ ಪ್ರಕಾಶ್‌ ಆಕ್ರೋಶಕ್ಕೆ ಕಾರಣನಾಗಿದ್ದ. ಹೀಗಾಗಿ ಭಾನುಪ್ರಕಾಶ್‌ನನ್ನು ಕೊಲೆ ಮಾಡಿದರೆ, ನಮ್ಮ ಶತ್ರು ಪ್ರಕಾಶ್‌ ಮೇಲೆ ಬರುತ್ತೆ ಎಂದು ದಿನೇಶ್‌ ಭಾವಿಸಿದ್ದ. ಆದ್ರೆ ಆತ ಬಳಸಿದ್ದ ಮೊಬೈಲ್‌ ಆತನನ್ನು ಹಿಡಿದುಕೊಟ್ಟಿದೆ.

Share Post