CrimeDistricts

ದರೋಡೆ ಕೇಸಲ್ಲಿ ಸಿಕ್ಕಿಬಿದ್ರು; ಗ್ಯಾಂಗ್‌ ರೇಪ್‌ ಕೇಸ್‌ ಬಾಯ್ಬಿಟ್ರು..!

ಬೆಳಗಾವಿ; ದರೋಡೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಆರೋಪಿಗಳು ಗ್ಯಾಂಗ್‌ ರೇಪ್‌ ಪ್ರಕರಣವೊಂದನ್ನು ಬಾಯ್ಬಿಟ್ಟಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ಈ ಪ್ರಕರಣ ನಡೆದಿದೆ.

ಅಂದಹಾಗೆ ಸೆಪ್ಟೆಂಬರ್‌ 13ರಂದು ಐದು ಜನರ ಗ್ಯಾಂಗ್‌ ಅನ್ನು ಡಕಾಯಿತಿ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆರೋಪಿಗಳ ವಿಚಾರಣೆ ವೇಳೆ ಸೆಪ್ಟೆಂಬರ್‌ 5 ರಂದು ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರ ಬಗ್ಗೆಯೂ ಬಾಯ್ಬಿಟ್ಟಿದ್ದಾರೆ. ಹೀಗಾಗಿ, ಆರೋಪಿಗಳಿಗೆ ಹೆದರಿ ಕೇಸ್‌ ದಾಖಲಿಸದೇ ಸುಮ್ಮನಿದ್ದ ಮಹಿಳೆಯನ್ನು ಪೊಲೀಸರು ಹುಡುಕಿ ಕರೆದುಕೊಂಡು ಬಂದು ಕೇಸ್‌ ಪಡೆದುಕೊಂಡಿದ್ದಾರೆ.

ಬೆನಚಿಮರಡಿ ಗ್ರಾಮದ ರಮೇಶ್ ಖಿಲಾರಿ, ದುರ್ಗಪ್ಪಾ ವಡ್ಡರ್, ಯಲ್ಲಪ್ಪ ಗಿಸ್ನಿಂಗವ್ವಗೊಳ್, ಕೃಷ್ಣಾ ಪೂಜೇರಿ, ರಾಮಸಿದ್ದ ತಪ್ಸಿ ಬಂಧತ ಆರೋಪಿಗಳು. ಸಂತ್ರಸ್ತ ಮಹಿಳೆ ಸೆಪ್ಟೆಂಬರ್‌ ಐದರಂದು ಗೋಕಾಕ್‌  ಬಸ್‌ ನಿಲ್ದಾಣದಲ್ಲಿ ಪರಿಚಯಸ್ಥ ವ್ಯಕ್ತಿ ಜೊತೆ ನಿಂತಿದ್ದಳು. ಇದೇ ವೇಳೆ ಪ್ರಮುಖ ಆರೋಪಿ ಬಸವರಾಜ ಖಿಲಾರಿ ಕೂಡಾ ಅಲ್ಲಿಗೆ ಬಂದಿದ್ದಾನೆ. ಆತನಿಗೂ ಆ ಮಹಿಳೆ ಪರಿಚಯಸ್ಥಳಾಗಿದ್ದಳು. ಹೀಗಾಗಿ ಬಸವರಾಜು ಮಹಿಳೆ ಹಾಗೂ ಆಕೆ ಜೊತೆಗಿದ್ದಾತನನ್ನು ಮಾತಾಡಿಸಿದ್ದಾನೆ. ಅನಂತರ ನನ್ನ ಮನೆ ಇಲ್ಲೇ ಇರೋದು ಬನ್ನಿ ಕಾಫಿ ಕುಡ್ಕೊಂಡು ಹೋಗಿ ಎಂದು ಕರೆದಿದ್ದಾನೆ. ಆತನ ಮಾತು ನಂಬಿ ಇಬ್ಬರೂ ಬಸವರಾಜು ಮನೆಗೆ ಹೋಗಿದ್ದಾರೆ.

ಮನೆಯಲ್ಲಿ ಇಬ್ಬರನ್ನೂ ಬಿಟ್ಟು, ಮನೆ ಬಾಗಿಲು ಹಾಕಿಕೊಂಡು ಹೋಗಿದ್ದ ಬಸವರಾಜು ತನ್ನ ಐವರು ಸ್ನೇಹಿತರನ್ನು ಕರೆತಂದು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅನಂತರ ಆಕೆ ಜೊತೆಗೆ ಬಂದಿದ್ದ ವ್ಯಕ್ತಿ ಜೊತೆ ಮಲಗಿಸಿ ವಿಡಿಯೋ ಮಾಡಿಕೊಂಡಿದ್ದಾರೆ. ಪೊಲೀಸರಿಗೆ ಮಾಹಿತಿ ತಿಳಿಸಿದರೆ ಈ ವಿಡಿಯೋ ವೈರಲ್‌ ಮಾಡ್ತೀವಿ. ಕೊಂದುಬಿಡ್ತೀವಿ ಎಂದೆಲ್ಲಾ ಧಮ್ಕಿ ಹಾಕಿ ಕಳುಹಿಸಿದ್ದಾರೆ. ಜೊತೆಗೆ ಅವರ ಬಳಿ ಇದ್ದ ಹಣ ಹಾಗೂ ಎಟಿಎಂ ಕಾರ್ಡ್‌ಗಳನ್ನು ಕೂಡಾ ಕಸಿದುಕೊಂಡಿದ್ದಾರೆ.

ಆರೋಪಿಗಳು ಬೆದರಿಸಿದ್ದರಿಂದ ಮಹಿಳೆ ದೂರು ಕೊಡದೇ ಸುಮ್ಮನಾಗಿದ್ದಳು. ಆದ್ರೆ ಇದೀಗ ದರೋಡೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರೋಪಿಗಳು, ಗ್ಯಾಂಗ್‌ ರೇಪ್‌ ಪ್ರಕರಣವನ್ನೂ ಬಾಯ್ಬಿಟ್ಟಿದ್ದಾರೆ. ಹೀಗಾಗಿ ಗೋಕಾಕ್‌ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಮುಖ ಆರೋಪಿ ಬಸವರಾಜು ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

 

Share Post