Cinema

ಕರ್ನಾಟಕ ಬಂದ್: ಬಲವಂತ ಬೇಡ

ಬೆಂಗಳೂರು: ಎಂಇಎಸ್ ನಿಷೇಧಕ್ಕೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್ ವಿಷಯ ಬಹಳ ಚರ್ಚೆಯಾಗುತ್ತಿದೆ. ಕರ್ನಾಟಕ ಬಂದ್‌ಗೆ ಚಿತ್ರರಂಗವು ನೈತಿಕ ಬೆಂಬಲ ಘೋಷಿಸಲಿದೆ ಎನ್ನಲಾಗಿದ್ದು, ಈ ಬಗ್ಗೆಯೂ ಪರ ವಿರೋಧ ಚರ್ಚೆ ವ್ಯಕ್ತವಾಗಿದೆ.
ಕರ್ನಾಟಕ ಬಂದ್‌ಗೆ ಚಿತ್ರರಂಗ ಸಂಪೂರ್ಣ ಬೆಂಬಲ ನೀಡಿ ಡಿಸೆಂಬರ್ 31ರಂದು ಚಿತ್ರರಂಗದ ಚಟುವಟಿಕೆಗಳನ್ನು ಬಂದ್ ಮಾಡಬೇಕು ಎಂದು ಸಾರಾ ಗೋವಿಂದು, ವಾಟಾಳ್ ನಾಗರಾಜ್ ಸೇರಿದಂತೆ ಇನ್ನೂ ಕೆಲವರು ಒತ್ತಾಯಿಸಿದ್ದಾರೆ. ಆದರೆ ಡಿಸೆಂಬರ್ 31 ಶುಕ್ರವಾರವಾಗಿದ್ದು ಅಂದು ಕೆಲವು ಸಿನಿಮಾಗಳ ಬಿಡುಗಡೆ ಇದೆ. ಹಾಗಾಗಿ ಅಂದು ಬಂದ್ ಮಾಡುವುದು ಬೇಡವೆಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ.
ನಟ ಚೇತನ್ ಅಹಿಂಸ ಚಿತ್ರರಂಗ ಬಂದ್ ಮಾಡುವ ವಿಷಯದ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಟ್ಟಂತೆ ಮಾತನಾಡಿದರು.ಡಿಸೆಂಬರ್ 31 ರಂದು ಕನ್ನಡಪರ ಸಂಘಟನೆಗಳು ಎಂಇಎಸ್ ಹಾಗೂ ಶಿವಸೇನೆ ಪುಂಡಾಟ ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ವಾಣಿಜ್ಯ ಚಲನಚಿತ್ರ ಮಂಡಳಿ ನೈತಿಕ ಬೆಂಬಲ ನೀಡುವುದಾಗಿ ಹೇಳಿದೆ. ಬಂದ್ ನಲ್ಲಿ ನೇರವಾಗಿ ಪಾಲ್ಗೊಳ್ಳುವುದು, ನೈತಿಕ ಬೆಂಬಲ ನೀಡುವ ವಿಚಾರ ಮಂಡಳಿಗೆ ಬಿಟ್ಟಿದ್ದು. ಆದರೆ, ಹೋರಾಟದಲ್ಲಿ ಪಾಲ್ಗೊಳ್ಳಲೇಬೇಕು ಎಂಬುದು ಸರಿಯಲ್ಲ. ಕನ್ನಡ ನಾಡು, ನುಡಿ, ನೆಲ, ಜಲ ವಿಚಾರವಾಗಿ ಬಂದಾಗ ನಟರೆಲ್ಲರೂ ಒಟ್ಟಾಗಿ ನಿಲ್ಲುತ್ತೇವೆ. ನಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸುತ್ತೇವೆ, ಹೋರಾಟ ಮಾಡುತ್ತೇವೆ. ಪ್ರತಿಭಟನೆ ಮಾಡಲು ಪ್ರತಿಯೊಬ್ಬರಿಗೂ ಹಕ್ಕಿದೆ” ಎಂದರು ನಟ ಚೇತನ್.

 

Share Post