Cinema

ವಿಶ್ವದಾದ್ಯಂತ ಜೇಮ್ಸ್‌ ದರ್ಬಾರ್: ರಾಜ್ಯದಲ್ಲಿ ಅಪ್ಪು ಅಭಿಮಾನಿಗಳ ಹರ್ಷೋದ್ಘಾರ

ಬೆಂಗಳೂರು: ಕನ್ನಡದ ಯುವರತ್ನ, ದೊಡ್ಮನೆ ಹುಡುಗನ ಹುಟ್ಟು ಹಬ್ಬ ಇಂದು. ರಾಜನಿಲ್ಲದ ರಾಜ್ಯದಲ್ಲಿ ಕಳೆದ ಐದು ತಿಂಗಳಿಂದ ಅಭಿಮಾನಿಗಳು ನೋವುಂಡು ಜೀವನ ನಡೆಸುತ್ತಿದ್ದರು. ಇಂದು ನೆಚ್ಚಿನ ನಾಯಕನ ಹುಟ್ಟು ಹಬ್ಬ ಜೊತೆಗೆ ಅಪ್ಪು ನಟನೆ ಮಾಡಿದ ಕೊನೆಯ ಚಿತ್ರ ʻಜೇಮ್ಸ್‌ʼ ಚಿತ್ರ ಬಿಡುಗಡೆ ಕೂಡ. ಅಭಿಮಾನಿಗಳ ಮನಸಿಗೆ ಮತ್ತೊಮ್ಮೆ ಹುರುಪು ತಂದಂತಿದೆ. ಎಲ್ಲರಿಂದ ದೂರವಾದ ಪುನೀತ್‌ ರಾಜ್‌ಕುಮಾರ್‌  ಈ ಚಿತ್ರದ ಮೂಲಕ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

ಇಂದು ಕರ್ನಾಟಕ ಸೇರಿ ವಿಶ್ವದಾದ್ಯಂತ ಜೇಮ್ಸ್‌ ತೆರೆಗೆ ಅಪ್ಪಳಿಸಿದೆ. ಅಭಿಮಾನಿಗಳು ಥಿಯೇಟರ್‌ಗಳ ಬಳಿ ಹುಚ್ಚೆದ್ದು ಕುಣಿಯುತ್ತಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು ಸೇರಿದಂತೆ ಎಲ್ಲಾ ಥಿಯೇಟರ್‌ಗಳಲ್ಲೂ ಜೇಮ್ಸ್‌ನದ್ದೇ ಹವಾ… ಅಗಲಿದ ನಟನಿಗೆ ಮುಗಿಲೆತ್ತರದ ಕಟೌಟ್‌ಗಳನ್ನು ನಿಲ್ಲಿಸಿ, ಹಾಲಿನ ಅಭಿಷೇಕ, ರಕ್ತದಾನ ಶಿಬಿರ, ಅನ್ನದಾನ, ನೇತ್ರದಾನ ಶಿಬಿರಗಳನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ.

ಕಂಠೀರವ ಸ್ಟುಡಿಯೋ ಬಳಿ ಸಾಲು ಸಾಲಾಗಿ ಅಭಿಮಾಇಗಳು ಆಗಮಿಸಿ ಲೂಜೆ ಸಲ್ಲಿಸುತ್ತಿದ್ದಾರೆ. ಅಪ್ಪುಗೆ ಇಷ್ಟವಾದ ಸಿಹಿ ತಿನಿಸುಗಳನ್ನು ನೈವೇದ್ಯ ಮಾಡ್ತಿದಾರೆ. ಥಿಯೇಟರ್‌, ಮಾಲ್‌ಗಳ ಬಳಿ ಪಟಾಕಿ ಸಿಡಿಸಿ, ಬ್ಯಾಂಡ್‌ ಸೆಟ್‌ ಮೂಲಕ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಎಲ್ಲಾ ಕಡೆ ಈಗಾಗಲೇ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ.

ಇನ್ನೂ ಸಿನಿಮಾ ನೋಡಿ ಬಂದ ಅಭಿಮಾನಿಗಳು ಅಪ್ಪು ನಮ್ಮೊಂದಿಗೆ ಇರಬೇಕಿತ್ತು ಎಂದು ಕಣ್ಣೀರಾಕುತ್ತಿದ್ದಾರೆ. ಅವರ ನಟನೆ, ನೃತ್ಯ ಅಭಿನಯಕ್ಕೆ ಸಮನ್ಯಾರು ಅಂತಿದಾರೆ ಫ್ಯಾನ್ಸ್‌, ಇಂದು ಕರ್ನಾಟಕದ ಜನತೆಗೆ ಹಬ್ಬದ ವಾತಾವರಣ ಸೃಷ್ಟಿಯಾಗಿರುವುದಂತೂ ನಿಜ. ಆದರೂ ಇಂತಹ ಸಂಭ್ರಮ ನೋಡಲು ಪುನೀತ್‌ ರಾಜ್‌ಕುಮಾರ್‌ ನಮ್ಮೊಂದಿಗೆ ಇರಬೇಕಿತ್ತು….

Share Post