Bengaluru

ಸದನಕ್ಕೆ ಹಾಜರಾಗಲು ಎಲ್ಲಾ ಸದಸ್ಯರಲ್ಲಿ ಸಭಾಧ್ಯಕ್ಷರ ಮನವಿ

ಬೆಂಗಳೂರು; ರಾಜ್ಯ ವಿಧಾನ ಸಭೆಯ 15 ನೇ ಅಧಿವೇಶನದ 15 ನೇ ಉಪವೇಶನಕ್ಕೆ ಎಲ್ಲಾ ಸದಸ್ಯರು ಹಾಜರಾಗಬೇಕೆಂದು ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಲ್ಲಿ ಇಂದು ಮನವಿ ಮಾಡಿದರು.ಫೆಬ್ರವರಿ 10 ರಿಂದ ನಡೆಯಲಿರುವ ಜಂಟಿ ಅಧಿವೇಶನ ಹಾಗೂ ಫೆಬ್ರವರಿ 17 ರಿಂದ ನಡೆಯಲಿರುವ ಆಯವ್ಯಯ ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸದನದ ಘನತೆಯನ್ನು ಹೆಚ್ಚಿಸುವಂತೆ ಸದಸ್ಯರಲ್ಲಿ ವಿನಂತಿಸಿದರು.
ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ಫೆಬ್ರವರಿ 10 ರಂದು ಪ್ರಾರಂಭವಾಗಲಿರುವ ಜಂಟಿ ಅಧಿವೇಶನದಲ್ಲಿ ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ರಾಜ್ಯಪಾಲರ ಭಾಷಣದ ನಂತರ ಚಳಿಗಾಲದ ಅಧಿವೇಶನದ ನಂತರ ಹಾಗೂ ಜಂಟಿ ಅಧಿವೇಶನದ ನಡುವೆ ಸ್ವರ್ಗಸ್ಥರಾದ ಗಣ್ಯಾತಿಗಣ್ಯರಿಗೆ ಸಂತಾಪ ಸೂಚನೆಯನ್ನು ಸಲ್ಲಿಸಲಾಗುತ್ತದೆ.ತದನಂತರ ಫೆಬ್ರವರಿ 13 ರಿಂದ ಸತತವಾಗಿ ನಾಲ್ಕು ದಿನಗಳು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಮತ್ತು ವಂದನಾ ನಿರ್ಣಯದ ಜೊತೆಗೆ ಎಂದಿನಂತೆ ಸದನದ ಕಾರ್ಯಕಲಾಪಗಳು ನಡೆಯುತ್ತವೆ.
ಅಂತೆಯೇ, ಫೆಬ್ರವರಿ 17 ರಂದು ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023-24 ನೇ ಸಾಲಿನ ಆಯವ್ಯಯವನ್ನು ಮಂಡಿಸುವುದರೊಂದಿಗೆ ಪ್ರಸಕ್ತ ಸಾಲಿನ ಆಯವ್ಯಯ ಅಧಿವೇಶನ ಪ್ರಾರಂಭವಾಗಲಿದೆ. ಆಯವ್ಯಯ ಮಂಡನೆಗೆ ಸಂಬಂಧಿಸಿದಂತೆ ಫೆಬ್ರವರಿ 20 ರಿಂದ 24 ರ ವರೆಗೆ ಚರ್ಚೆ ನಡೆಯಲಿದೆ ಎಂದು ಪ್ರಕಟಿಸಿದ ಸಭಾಧ್ಯಕ್ಷರು 11 ದಿನಗಳ ಅಧಿವೇಶನದ ಅವಧಿಯಲ್ಲಿ 9 ದಿನಗಳು ಪ್ರಶ್ನೋತ್ತರ ಕಲಾಪ ಹಾಗೂ ಶೂನ್ಯ ವೇಳೆಯಲ್ಲಿ ಚರ್ಚೆಯೂ ಒಳಗೊಂಡಂತೆ ಇತರೆ ಕಾರ್ಯಕಲಾಪಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಫೆಬ್ರವರಿ 13 ರಂದು ಸಭಾ ನಾಯಕರೂ ಆದ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕರು ಹಾಗೂ ಸದನ ನಾಯಕರೊಂದಿಗೆ ಸದನ ಕಾರ್ಯಕಲಾಪ ಸಮಿತಿ ಸಭೆ ನಡೆಯಲಿದ್ದು, ಸದನದ ನಡೆಯನ್ನು ನಿರ್ಧರಿಸಲಿದೆ. ಇದೀಗ ಸದನದಲ್ಲಿ ಮಂಡನೆಗೆ ಏಳು ವಿಧೇಯಕಗಳು ಸ್ವೀಕೃತವಾಗಿದ್ದು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಹಾಗೂ ಆರು ಖಾಸಗಿ ವಿಶ್ವವಿದ್ಯಾನಿಲಯಗಳ ವಿಧೇಯಕಗಳು ಒಳಗೊಂಡಿವೆ. ಅಲ್ಲದೇ, 1300 ಪ್ರಶ್ನೆಗಳು ಸ್ವೀಕೃತವಾಗಿವೆ ಎಂದು ಮಾಹಿತಿ ನೀಡಿದರು.

Share Post