BengaluruCrime

ಹನಿಟ್ರ್ಯಾಪ್‌ ಮಾಡಿ ಉದ್ಯಮಿಯ ಸುಲಿಗೆ; ಸ್ಯಾಂಡಲ್‌ವುಡ್‌ ಯುವ ನಟ ಅರೆಸ್ಟ್‌

ಬೆಂಗಳೂರು; ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ ಉದ್ಯಮಿಯೊಬ್ಬರಿಂದ ನಿರಂತರವಾಗಿ ಹಣ ವಸೂಲಿ ಮಾಡುತ್ತಿದ್ದ ಸ್ಯಾಂಡಲ್‌ವುಡ್‌ ಯುವ ನಟನೊಬ್ಬನನ್ನು ಹಲಸೂರು ಗೇಟ್‌ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಜೆಪಿ ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಎಂದು ಗುರುತಿಸಲಾಗಿದೆ. ಈತ ಮಿಸ್ಟರ್ ಭೀಮರಾವ್ ಎಂಬ ಸಿನಿಮಾಕ್ಕೆ ನಾಯಕನಾಗಿ ನಟಿಸಿದ್ದ ಎಂದು ತಿಳಿದುಬಂದಿದೆ.

ಇಬ್ಬರು ಯುವತಿಯರ ಹೆಸರು ಬಳಸಿಕೊಂಡು  ಎಲೆಕ್ಟ್ರಾನಿಕ್ ಸಿಟಿಯ ಉದ್ಯಮಿಯೊಬ್ಬರೊಂದಿಗೆ ಈ ನಟ ಚಾಟ್‌ ಮಾಡಿದ್ದ. ಉದ್ಯಮಿಗೆ ಇತ್ತೀಚೆಗೆ ಇಬ್ಬರು ಯುವತಿಯರು ಪರಿಚಯವಾಗಿದ್ದರು. ಹೀಗಾಗಿ ಉದ್ಯಮಿ ಕೂಡ ಪರಿಚಯದ ಯುವತಿರೆಂದು ಸಲುಗೆಯಿಂದ ಚಾಟ್ ಮಾಡಿದ್ದರು. ಆ ಬಳಿಕ ಯುವ ನಟ ಯುವ ಇದೇ ಚಾಟ್‌ಗಳ ಸ್ಕ್ರೀನ್‌ ಶಾಟ್‌ ಇಟ್ಟುಕೊಂಡು ನಾನು ಪೊಲೀಸ್‌ ಅಧಿಕಾರಿ, ನಿಮ್ಮ ವಿರುದ್ಧ ದೂರು ಬಂದಿದೆ ಎಂದು ಉದ್ಯಮಿ ಮನೆಗೆ ಹೋಗಿದ್ದ. ನಂತರ ಕೇಸ್‌ ಕ್ಲೋಸ್‌ ಮಾಡಲು ಹಣ ಕೊಡಿ ಎಂದು ಸತತವಾಗಿ ಹಣ ಪಡೆದಿದ್ದ ಎಂದು ತಿಳಿದುಬಂದಿದೆ.

ಮೊದಲಿಗೆ ಐವತ್ತು ಸಾವಿರ ರೂಪಾಯಿ ಕೊಟ್ಟಿದ್ದ ಉದ್ಯಮಿ, ನಂತರ ಬ್ಯಾಂಕ್‍ನಿಂದ ಮೂರು ಲಕ್ಷ ರೂ. ಡ್ರಾ ಮಾಡಿ ಕೊಟ್ಟಿದ್ದರು. ಹಂತ ಹಂತವಾಗಿ ಒಟ್ಟು ಹದಿನಾಲ್ಕು ಲಕ್ಷಕ್ಕೂ ಹೆಚ್ಚಿನ ಹಣವನ್ನು ಯುವ ಪಡೆದಿದ್ದ ಎನ್ನಲಾಗಿದೆ. ನಂತರ ಈ ಬಗ್ಗೆ ಅನುಮಾನ ಬಂದು ಉದ್ಯಮಿ ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ನಿಜ ಬಣ್ಣ ಬಯಲಾಗಿದೆ.

 

Share Post