BengaluruCrime

ಲಾಡ್ಜ್‌ನಲ್ಲಿ ಪತ್ತೆಯಾಯ್ತಾ 2 ಕೋಟಿ ಹವಾಲಾ ಹಣ..?; ಪ್ರಕರಣ ಮುಚ್ಚಿ ಹಾಕ್ತಾರಾ..?

ಬೆಂಗಳೂರು; ಹವಾಲಾ ಹಣ ಇರುವ ಬಗ್ಗೆ ಮಾಹಿತಿ ಮೇರೆಗೆ ಪೊಲೀಸರು ಬೆಂಗಳೂರಿನ ಮೆಜೆಸ್ಟಿಕ್‌ ಬಳಿಯ ಗಾಂಧಿ ನಗರದ ಸರಸ್ವತಿ ಲಾಡ್ಜ್‌ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೇಳೆ 2 ಕೋಟಿ ರೂಪಾಯಿ ಹವಾಲಾ ಹಣ ಪತ್ತೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಪೊಲೀಸರು ಯಾವುದೇ ದಾಳಿ ನಡೆದಿಲ್ಲ ಎಂದು ಹೇಳಿದ್ದಾರೆ ಅಂತ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಈ ನಡುವೆ ಪೊಲೀಸರು ಲಾಡ್ಜ್‌ಗೆ ಬಂದು ಪರಿಶೀಲನೆ ಮಾಡಿ ಹೋಗಿರುವ ಬಗ್ಗೆ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಹೀಗಾಗಿ ಹಲವು ಅನುಮಾನಗಳು ವ್ಯಕ್ತವಾಗಿವೆ.

ಸರಸ್ವತಿ ಲಾಡ್ಜ್‌ನಲ್ಲಿ 48 ಕೊಠಡಿಗಳಿದ್ದು, ಅವುಗಳನ್ನೆಲ್ಲಾ ಸುಮಾರು ಒಂದು ಗಂಟೆ ಕಾಲ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಬೆಳಗ್ಗೆ 10.30ರ ಸಂದರ್ಭದಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಲಾಡ್ಜ್‌ ಮಾಲೀಕರು ಕೂಡಾ ಪೊಲೀಸರು ಬಂದು ಹೋಗಿದ್ದನ್ನು ಒಪ್ಪಿಕೊಂಡಿದ್ದಾರೆ ಅಂತ ಹೇಳಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ಪೊಲೀಸರು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆಯೇ ಎಂಬ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಯಾಕಂದ್ರೆ, ಈ ಘಟನೆ ಬಗ್ಗೆ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಜೊತೆಗೆ ಹಣ ಸಿಕ್ಕ ಬಗ್ಗೆಯೂ ಮಾಹಿತಿ ಇಲ್ಲ.  ಈ ಬಗ್ಗೆ ಸ್ಥಳೀಯರು ಮಾತನಾಡುತ್ತಿದ್ದು, ಪೊಲೀಸರು ಇದು ನಿಜವೋ, ಸುಳ್ಳೋ ಅನ್ನೋದನ್ನು ಹೇಳಬೇಕಾಗಿದೆ.

 

Share Post