Bengaluru

ಕಾಂಗ್ರೆಸ್‍ನಲ್ಲಿ ಅಧಿಕಾರವಾದಿ ಸಿದ್ದರಾಮಣ್ಣ ಮತ್ತು ಕಾಂಗ್ರೆಸ್‍ವಾದಿ ಡಿಕೆಶಿ ನಡುವೆ ಆಂತರಿಕ ಕಲಹ ಇದೆ-ಕಟೀಲ್

ಬೆಂಗಳೂರು: ಸಿದ್ದರಾಮಯ್ಯರಲ್ಲಿದ್ದ ಸಮಾಜವಾದಿ ಚಿಂತನೆಗಳು ಹೊರಗೆ ಹೋಗಿವೆ. ಅಧಿಕಾರವಾದಿ ಚಿಂತನೆಗಳು ಒಳಗೆ ಬಂದಿವೆ. ಕಾಂಗ್ರೆಸ್‍ನಲ್ಲಿ ಅಧಿಕಾರವಾದಿ ಸಿದ್ದರಾಮಣ್ಣ ಮತ್ತು ಕಾಂಗ್ರೆಸ್‍ವಾದಿ ಡಿ.ಕೆ.ಶಿವಕುಮಾರ್ ಅವರ ನಡುವೆ ಚರ್ಚೆಗಳು ಪ್ರಾರಂಭವಾಗಿವೆ. ಆಂತರಿಕ ಕಲಹಗಳು ಹೆಚ್ಚಾಗಿವೆ. ಹಿಜಾಬ್ ಬಗ್ಗೆ ಅಧಿವೇಶನದಲ್ಲಿ ಮಾತು ಬರಬಾರದೆಂಬ ಕಾರಣಕ್ಕಾಗಿ ಧರಣಿ ನಡೆಸಲಾಗುತ್ತಿದೆ. ಹಿಜಾಬ್ ಪರ- ವಿರೋಧ ಮಾತನಾಡಿದರೆ ಕಾಂಗ್ರೆಸ್ ಮೈನಸ್ ಆಗುವ ಭಯ ಕಾಂಗ್ರೆಸಿಗರಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾತನಾಡಿದ ಕಟೀಲ್, ಕಾಂಗ್ರೆಸ್ ಆಡಳಿತದಲ್ಲಿ 24 ಹಿಂದೂಗಳ ಹತ್ಯೆ ಆಗಿದೆ, ಆಗ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ಯಾಕೆ ರಾಜೀನಾಮೆ ಕೊಟ್ಟಿಲ್ಲ?  ನಿಮ್ಮ ಜಮೀರ್ ಮೇಲೆ ಎಫ್‍ಐಆರ್ ಆಗಿರುವಾಗ ನೀವೇಕೆ ಅವರ ರಾಜೀನಾಮೆ ಪಡೆಯುತ್ತಿಲ್ಲ? ಈಶ್ವರಪ್ಪ, ಆರಗ ಜ್ಞಾನೇಂದ್ರ ಅವರ ರಾಜೀನಾಮೆ ಕೇಳುವ ನೀವು ನಿಮ್ಮ ಶಾಸಕರ ರಾಜೀನಾಮೆಯನ್ನೇಕೆ ಪಡೆಯುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ರು.

ಶಿವಮೊಗ್ಗದಲ್ಲಿ ನಡೆದ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಹತ್ಯೆಯನ್ನು ಖಂಡಿಸಿದ ಅವರು, ಇದರ ಹಿಂದಿರುವ ಯಾವುದೇ ಶಕ್ತಿಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಹಿಜಾಬ್ ಗಲಭೆ ಹಿಂದೆ ಯೋಚನೆ, ಯೋಜನೆಗಳು ಕಾಂಗ್ರೆಸ್‍ನದು. ಎಸ್‍ಡಿಪಿಐ ಅದನ್ನು ಅನುಷ್ಠಾನಕ್ಕೆ ತಂದಿದೆ. ಕುರಾನ್‍ನಲ್ಲಿ ಹಿಜಾಬ್ ಕುರಿತು ಉಲ್ಲೇಖ ಇದೆಯೇ? ದೇಶದ ಸಂವಿಧಾನ, ನೀವೇ ತಂದ ಕಾನೂನನ್ನು ಮುರಿಯಲು ನೀವು ಪ್ರೇರಣೆ ಕೊಡುವಿರಾ? ನಿಮ್ಮ ಸಮಾಜವಾದಿ ಪರಿಕಲ್ಪನೆಯಡಿ ಶಾಲೆಗಳಲ್ಲಿ ಸಮವಸ್ತ್ರ ಹಾಕುವುದು ಜಾರಿಗೊಂಡಿದೆ. ಇವತ್ತು ಅದನ್ನು ನೀವೇ ಬಹಿಷ್ಕರಿಸುವಿರಾ?  ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.

ಚರ್ಚೆಗಳನ್ನು ದಾರಿ ತಪ್ಪಿಸುವ ಮತ್ತು ಅಧಿವೇಶನ ಮೊಟಕುಗೊಳಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್‍ನ ಈ ಕ್ರಮವನ್ನು ಜನತೆ ಸಹಿಸುವುದಿಲ್ಲ. ಕಾಂಗ್ರೆಸ್‍ಮುಕ್ತ ಕರ್ನಾಟಕ ಆಗುವ ಭಯ ಕಾಂಗ್ರೆಸ್ ಮುಖಂಡರಲ್ಲೇ ಇದೆ ಎಂದರು.

Share Post