Bengaluru

ಬೆಂಗಳೂರಲ್ಲಿ ಹಾಡಹಗಲೇ ಕತ್ತುಸೀಳಿ ಕೊಲೆ

ಬೆಂಗಳೂರು: ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕುತ್ತಿಗೆ ಸೀಳಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ನಂದನಿ ಲೇಔಟ್‌ ಬಳಿಯ ನರಸಿಂಹ ಸ್ವಾಮಿ ಲೇಔಟ್‌ನಲ್ಲಿ ನಡೆದಿದೆ. ಸ್ನೇಹಿತನ ಮನೆಗೆ ಹೋಗಿ ವಾಪಸ್‌ ಬರುತ್ತಿದ್ದಾಗ ದಾಳಿ ಮಾಡಿರುವ ದುಷ್ಕರ್ಮಿಗಳು ಕುತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

   ವಿದ್ಯಾರಣ್ಯಪುರದ  ವಿಶ್ವನಾಥ ಎಂಬಾತನೇ ಕೊಲೆಯಾದ ವ್ಯಕ್ತಿ. ಈ ಹಿಂದೆ ಇದೇ ನರಸಿಂಹಸ್ವಾಮಿ ಲೇಔಟ್​​​ನಲ್ಲಿ ಈತ ವಾಸವಾಗಿದ್ದನೆಂದು ತಿಳಿದುಬಂದಿದೆ. ನರಸಿಂಹಸ್ವಾಮಿ ಲೇಔಟ್‌ನಲ್ಲಿದ್ದಾಗ ವಿವಾಹೇತರ ಸಂಬಂಧದ ವಿಚಾರಚಾಗಿ ಗಲಾಟೆ ನಡೆದಿತ್ತು. ಇದೇ ಕಾರಣಕ್ಕೆ ಕೊಲೆಯಾಗಿರಬಹುದು ಎಂದು ಹೇಳಲಾಗುತ್ತಿದೆ.

ಇಂದು ಬೆಳಗ್ಗೆ ರವಿ ಎಂಬುವವರ ಮನೆಗೆ ಬಂದಿದ್ದ ವಿಶ್ವನಾಥ್‌ ಅವರ ಮನೆಯಿಂದ ಬರುತ್ತಿದ್ದಂತೆ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಕತ್ತು ಸೀಳಿ ಪರಾರಿಯಾಗಿದ್ದಾನೆ. ಇನ್ನು ವಿಶ್ವನಾಥ್‌ ಭೇಟಿ ಮಾಡಿದ್ದ ರವಿ ಕೂಡಾ ಪರಾರಿಯಾಗಿದ್ದಾನೆ. ಹೀಗಾಗಿ ಈ ಕೊಲೆ ಹಿಂದೆ ರವಿ ಕೈವಾಡವೂ ಇರಬಹುದೇ ಎಂದು ತನಿಖೆ ನಡೆಸಲಾಗುತ್ತಿದೆ.

Share Post