Bengaluru

ಟಿಶ್ಯೂ ಪೇಪರ್‌ನಲ್ಲಿ ಬಾಂಬ್‌ ಇಟ್ಟಿರುವ ಸಂದೇಶ; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕ

ದೇವನಹಳ್ಳಿ;  ಬೆಂಗಳೂರು-ಜೈಪುರದ ಇಂಡಿಗೋ ವಿಮಾನದ ಶೌಚಾಲಯ ಬಳಿ ಸಿಕ್ಕ ಟಿಶ್ಯೂ ಪೇಪರ್​ನಲ್ಲಿ ಬಾಂಬ್ ಬೆದರಿಕೆಯ ಸಂದೇಶವೊಂದು ಪತ್ತೆಯಾಗಿದೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಾಂಬ್ ಬೆದರಿಕೆ ಬರಹ ಬರೆದಿದ್ದಾರೆನ್ನಲಾದ ಇಬ್ಬರು ಶಂಕಿತರನ್ನ ಕಸ್ಟಮ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈ ಘಟನೆ ಭಾನುವಾರ ತಡರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

  ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನುವಾರ ರಾತ್ರಿ 9:26ಕ್ಕೆ ಇಂಡಿಗೋ 6E- 556 ವಿಮಾನ ಜೈಪುರದಿಂದ ಆಗಮಿಸಿತ್ತು. ಈ ವೇಳೆ ವಿಮಾನದ ಶೌಚಾಲಯದ ಬಳಿ ಟಿಶ್ಯೂ ಪೇಪರ್​ ಪತ್ತೆಯಾಗಿತ್ತು. ಅದರಲ್ಲಿ ‘ಲ್ಯಾಂಡ್ ಮಾಡಬೇಡಿ, ವಿಮಾನದಲ್ಲಿ ಬಾಂಬ್ ಇದೆ’ ಎಂದು ಹಿಂದಿ ಅಕ್ಷರದಲ್ಲಿ ಬರೆದ ಸಂದೇಶವಿತ್ತು. ಇದರಿಂದ ಕೆಲಕಾಲ ಆಂತಕ ಉಂಟಾಗಿತ್ತು.

 ವಿಮಾನದ ಸಿಬ್ಬಂದಿಯೊಬ್ಬರು ಶೌಚಾಲಯದ ಹಿಂಭಾಗ ಹೋದಾಗ ಬಾಂಬ್​ ಬೆದರಿಕೆ ಸಂದೇಶದ ಟಿಶ್ಯೂ ಪೇಪರ್ ಪತ್ತೆಯಾಗಿದೆ. ತಕ್ಷಣವೇ ಕ್ಯಾಪ್ಟನ್​ಗೆ ತಿಳಿಸಿದ್ದಾರೆ.  ವಿಮಾನದಲ್ಲಿದ್ದ 174 ಪ್ರಯಾಣಿಕರನ್ನ ಕೆಳಗಿಳಿಸಿ ಬ್ಯಾಗ್​ಗಳ ತಪಾಸಣೆ ಕೈಗೊಳ್ಳಲಾಯಿತು.

Share Post