Politics

ಸಿಎಂ ಹಾಗೂ ಡಿಸಿಎಂ ತವರು ಕ್ಷೇತ್ರಗಳು ಸೋತರೆ ಪರಿಸ್ಥಿತಿ ಏನು..?

ಬೆಂಗಳೂರು; ಲೋಕಸಭಾ ಚುನಾವಣೆಯ ಎಲ್ಲಾ ಏಳೂ ಹಂತಗಳ ಮತದಾನ ಇಂದಿಗೆ ಮುಕ್ತಾಯವಾಗುತ್ತಿದೆ.. ಸಂಜೆ ಆರು ಗಂಟೆಯ ನಂತರ ಚುನಾವಣೋತ್ತರ ಸಮೀಕ್ಷೆಗಳು ಕೂಡಾ ಬರಲಿವೆ.. ಇದಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ.. ಈ ನಡುವೆ ರಾಜ್ಯದಲ್ಲಿ ಸಿಎಂ ಹಾಗೂ ಡಿಸಿಎಂ ತವರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋತರೆ ಪರಿಸ್ಥಿತಿ ಏನು ಎಂಬ ಪ್ರಶ್ನೆ ಮೂಡಿದೆ.. ಸಿಎಂ ಸಿದ್ದರಾಮಯ್ಯ ಅವರ ವರುಣಾ ವಿಧಾನಸಭಾ ಕ್ಷೇತ್ರ ಚಾಮರಾಜನಗರಕ್ಕೆ ಸೇರಿದ್ದರೂ, ಸಿದ್ದರಾಮಯ್ಯ ಅವರ ತವರು ಮೈಸೂರು ಎಂದೇ ಹೇಳಬೇಕಾಗುತ್ತದೆ.. ಹೀಗಾಗಿ, ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆದ್ದರೆ ಮಾತ್ರ ಸಿಎಂ ಸ್ಥಾನಕ್ಕೆ ಗೌರವ ಸಿಗಲಿದೆ.. ಆದ್ರೆ, ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋತರೆ ಸಿಎಂ ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಲು ಪ್ರತಿಪಕ್ಷಗಳಿಗೆ ಅಸ್ತ್ರ ಸಿಕ್ಕಂತಾಗುತ್ತದೆ.. ಅದೇ ರೀತಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಪರಿಸ್ಥಿತಿಯೂ ಇದೇ ಆಗಿದೆ.. ಇಲ್ಲಿ ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಸಹೋದರ ಡಿ.ಕೆ.ಸುರೇಶ್‌ ಅವರೇ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ.. ಇಲ್ಲೂ ಕೂಡಾ ಈ ಬಾರಿ ಬಿಗ್‌ ಫೈಟ್‌ ಇದೆ.. ಹೀಗಾಗಿ ಡಿ.ಕೆ.ಸುರೇಶ್‌ ಸೋತರೆ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಮುಜುಗರ ಆಗೋದ್ರಲ್ಲಿ ಎರಡು ಮಾತಿಲ್ಲ..

ಕಾಂಗ್ರೆಸ್‌ ಹೈಕಮಾಂಡ್‌ ಈ ಬಾರಿ ಹತ್ತಕ್ಕೂ ಹೆಚ್ಚು ಸಚಿವರನ್ನೇ ಲೋಕಸಭಾ ಕಣಕ್ಕಿಳಿಸಲು ತೀರ್ಮಾನ ಮಾಡಿತ್ತು.. ಆದ್ರೆ ಯಾವ ಸಚಿವರೂ ಇದಕ್ಕೆ ಒಪ್ಪಿರಲಿಲ್ಲ.. ಹೀಗಾಗಿ ಸಚಿವರ ಮಕ್ಕಳು, ಸಂಬಂಧಿಕರನ್ನೇ ಕಣಕ್ಕಿಳಿಸಿ, ಸಚಿವರಿಗೆ ಅವರನ್ನು ಗೆಲ್ಲಿಸಿಕೊಂಡು ಬರುವ ಟಾಸ್ಕ್‌ ನೀಡಲಾಗಿತ್ತು.. ಸುಮಾರು 14 ಕ್ಷೇತ್ರಗಳಲ್ಲಿ ಸಚಿವರು ಹಾಗೂ ನಾಯಕರಿಗೆ ಟಾಸ್ಕ್‌ ನೀಡಲಾಗಿದೆ.. ಒಂದು ವೇಳೆ ಟಾಸ್ಕ್‌ ಸೋತರೆ ಅವರಿಗೆ ಸಚಿವ ಸ್ಥಾನ ಅಥವಾ ಇತರೆ ಹುದ್ದೆ ಕಳೆದುಕೊಳ್ಳುವ ಭೀತಿ ಇದೆ.. ಈ ನಡುವೆ ಸಿಎಂ ಹಾಗೂ ಡಿಸಿಂ ತವರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಸೋತರೂ ಕಾಂಗ್ರೆಸ್‌ ಹೈಕಮಾಂಡ್‌ ಅಸಮಾಧಾನಗೊಳ್ಳುವ ಸಾಧ್ಯತೆ ಇದೆ.. ಜೊತೆಗೆ ಪ್ರತಿಪಕ್ಷಗಳು ಸಿಎಂ, ಡಿಸಿಎಂ ರಾಜೀನಾಮೆ ಕೂಡಾ ಕೇಳಬಹುದು..

ಹೀಗಾಗಿಯೇ ಬಿಜೆಪಿ ಹೈಕಮಾಂಡ್‌ ಸಿಎಂ ಹಾಗೂ ಡಿಸಿಎಂ ತವರು ಕ್ಷೇತ್ರಗಳಲ್ಲಿ ವಿಶೇಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಲಕ್ಷ್ಮಣ್‌ ಕಾಂಗ್ರೆಸ್‌ ಅಭ್ಯರ್ಥಿಯಾದರೆ, ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.. ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯಾದರೆ ಡಾ.ಸಿ.ಎನ್‌.ಮಂಜುನಾಥ್‌ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.. ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳನ್ನು ಜನರು ಪಕ್ಷಾತೀತವಾಗಿ ಇಷ್ಟಪಡುತ್ತಾರೆ.. ಹೀಗಾಗಿ ಇವರಿಬ್ಬರಿಗೆ ಜನರು ಪಕ್ಷ ನೋಡದೆ ಮತ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ..

ಇನ್ನು ಬಿಜೆಪಿಯವರು ಈಗಾಗಲೇ ಗೆಲ್ಲಬಹುದಾದ ಸಂಭಾವ್ಯ ಕ್ಷೇತ್ರಗಳ ಪಟ್ಟಿಯನ್ನು ರೆಡಿ ಮಾಡಿದ್ದು, ಮೈಸೂರು-ಕೊಡಗು ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳು ಅವರ ಪಟ್ಟಿಯಲ್ಲಿವೆ.. ಬಿಜೆಪಿ ಹಾಗೂ ಜೆಡಿಎಸ್‌ ನಾಯಕರಿಗೆ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲೋದು ಖಚಿತ ಎಂಬ ವಿಶ್ವಾಸವಿದೆ.. ಇತ್ತ ಕಾಂಗ್ರೆಸ್ಸಿಗರಿಗೆ ಮೈಸೂರು-ಕೊಡಗು ಕ್ಷೇತ್ರ ಗೆಲ್ಲೋದರ ಬಗ್ಗೆ ವಿಶ್ವಾಸವಿಲ್ಲ.. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಗ್ಗೆಯೂ ಫಿಫ್ಟಿ ಫಿಫ್ಟಿ ವಿಶ್ವಾಸ ಇದೆ ಎಂದೇ ಹೇಳಲಾಗುತ್ತಿದೆ.. ಹೀಗಾಗಿ ಒಂದು ವೇಳೆ ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ ಪರಿಸ್ಥಿತಿ ಏನಾಗಬಹುದು ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ..

Share Post