Politics

ಮತ್ತೆ ಲಾಕ್‌ಡೌನ್‌ ಆದರೆ ಬಿಜೆಪಿಯೇ ಕಾರಣ : ಸಿದ್ಧರಾಮಯ್ಯ

ರಾಮನಗರ : ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದಂತೆ ಮಾಧ್ಯಮ ಮಿತ್ರರೊಂದಿಗೆ ಇಂದು ಸಿದ್ದರಾಮಯ್ಯ ಮಾತನಾಡಿದ್ದಾರೆ. ಮೂರನೇ ದಿನದ ಪಾದಯಾತ್ರೆಯಲ್ಲಿ ಭಾಗವಹಿಸಲು ಬಂದ ಸಿದ್ದರಾಮಯ್ಯ ಬಿಜೆಪಿಯ ಮೇಲೆ ಕಿಡಿ ಕಾರಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಆದರೆ ಅದಕ್ಕೆ ಬಿಜೆಪಿಯೇ ನೇರ ಹೊಣೆ ಹೊರೆತು ಕಾಂಗ್ರೆಸ್‌ ಅಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.

ನೆನ್ನೆ ಪಾದಯಾತ್ರೆಗೆ ಆರೋಗ್ಯದ ಸಮಸ್ಯೆಯ ಕಾರಣ ಗೈರಾಗಿದ್ದ ಸಿದ್ದರಾಮಯ್ಯ ಅವರು ಇಂದು ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು. ಪಾದಯಾತ್ರೆ ಮಾಡಿದ್ದಕ್ಕೆ 31 ಜನರ ಮೇಲೆ ಕೇಸ್‌ ಹಾಕಿಸಿದ್ದೀರಿ. ಅದೇ ಬಿಜೆಪಿಯವರು ಕಾರ್ಯಕ್ರಮ ಮಾಡಿದಾಗ ಯಾರ ಮೇಲೆ ಕೇಸ್‌ ಹಾಕಿದ್ದೀರಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಲಾಕ್‌ಡೌನ್‌ ಮಾಡುವಷ್ಟು ಪರಿಸ್ಥಿತಿ ಹದಗೆಟ್ಟಿಲ್ಲ, ಈಗ ನಮ್ಮ ಪಾದಯಾತ್ರೆಯ ಸಲುವಾಗಿ ಲಾಕ್‌ಡೌನ್‌ ನಾಟಕ ಆಡ್ತಿದ್ದಾರೆ. ಕಳೆದ ಬಾರಿ ಲಾಕ್‌ಡೌನ್‌ನಿಂದ ಲಕ್ಷಾಂತರ ಮಂದಿ ಸಂಕಷ್ಟ ಅನುಭವಿಸಿದ್ದಾರೆ. ಲಾಕ್‌ಡೌನ್‌ ಮಾಡುವುದು ಸೂಕ್ತವಲ್ಲ. ಹೀಗಾಗಿ ಗೃಹ ಸಚಿವರು ಅರಿತು ಮಾತನಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

Share Post