National

ಕಾರು ಪಂಕ್ಷರ್‌ ಆಗಿ ಭಾರಿ ದುರಂತ; ಉತ್ತರ ಪ್ರದೇಶದಲ್ಲಿ ಐವರು ದುರ್ಮರಣ

ಬರೇಲಿ; ಉತ್ತರ ಪ್ರದೇಶದ ಬರೇಲಿ ಬಳಿಯ ಲಾಲ್​ಪುರ ಗ್ರಾಮದಲ್ಲಿ ಕಾರು ಪಂಕ್ಚರ್‌ ಆಗಿದ್ದರಿಂದ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದ್ದು, ದುರಂತದಲ್ಲಿ ಐವರು ದಾರುಣ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಐವರು ಮೃತಪಟ್ಟಿದ್ದು, ಎಲ್ಲರೂ ಉತ್ತರಾಖಂಡದ ರಾಮ್ ನಗರದ ನಿವಾಸಿಗಳು ಎಂದು ಗುರುತಿಸಲಾಗಿದೆ.

ರಾಮನಗರ ನಿವಾಸಿ ಇಬ್ರಾಹಿಂ ಮಗ ಸಗೀರ್ (35), ಭವಾನಿಗಂಜ್ ನಿವಾಸಿ ತಸ್ಬರ್ ಮಗ ಮುಝಮ್ಮಿಲ್ (36), ರಾಮನಗರ ನಿವಾಸಿ ನಮಲುಮ್ ಮಗ ಮೊ.ತಾಹಿರ್ (40), ಭವಾನಿಗಂಜ್ ನಿವಾಸಿ ಅಖ್ಲಾಕ್ ಖಾನ್ ಮಗ ಇಮ್ರಾನ್ ಖಾನ್ (38) ಹಾಗೂ ರಾಮನಗರ ನಿವಾಸಿ ಉಬೈದುರ್ ರೆಹಮಾನ್ ಮಗ ಮೊ. ಫರೀದ್ (35) ಎಂದು ಗುರುತಿಸಲಾಗಿದೆ.

ಉತ್ತರಾಖಂಡದ ರಾಮ್ ನಗರದಿಂದ ವ್ಯಾಪಾರಿಗಳು ಹರ್ದೋಯ್‌ನ ಬಿಲ್​ಗ್ರಾಮ್ ಷರೀಫ್‌ನಲ್ಲಿರುವ ದರ್ಗಾಕ್ಕೆ ಹೋಗುತ್ತಿದ್ದರು. ಎರಡು ವಾಹನಗಳಲ್ಲಿ 10 ಮಂದಿ ಪ್ರಯಾಣಿಸುತ್ತಿದ್ದರು. ಇಜ್ಜತ್‌ನಗರ ಪೊಲೀಸ್ ಠಾಣೆಯ ಲಾಲ್‌ಪುರ ಔಟ್‌ಪೋಸ್ಟ್ ಅಹ್ಲಾದ್‌ಪುರ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಪಂಕ್ಚರ್​ ಆಗಿ ಎದುರಿಗೆ ಬರುತ್ತಿದ್ದ ಟ್ಯಾಂಕರ್​ಗೆ ಡಿಕ್ಕಿ ಹೊಡೆದಿದೆ.  ಪರಿಣಾಮ ಕಾರಿನಲ್ಲಿ ಕುಳಿತಿದ್ದ ಐವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡರು. ಬಳಿಕ ಕಾರಿನಿಂದ ಹೊರ ತೆಗೆದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.

Share Post