National

ವಿವಾದಕ್ಕೆ ಕಾರಣವಾದ ಜಿನ್ನಾ ಟವರ್‌ಗೆ ತ್ರಿವರ್ಣ ಧ್ವಜದ ರಂಗು

ಗುಂಟೂರು: ಭಾರತ ವಿಭಜನೆ ಪಾಕಿಸ್ತಾನ ರಚನೆಗೆ ಕಾರಣವಾದ ಮಹಮ್ಮದ್ ಅಲಿ ಜಿನ್ನಾ ಹೆಸರಿನಲ್ಲಿರುವ ಟವರ್ ಅನ್ನು ಮರುನಾಮಕರಣ ಮಾಡುವಂತೆ ಬಿಜೆಪಿ ಆಗ್ರಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ನಡುವೆ ಕೆಲ ಬಿಜೆಪಿ ಮುಖಂಡರು ಕೂಡ ಟವರ್‌ ಕೆಡವಬೇಕು ಎಂದು ಒತ್ತಾಯಿಸಿದರು. ವಿವಾದದ ನಡುವೆ  ಗುಂಟೂರಿನಲ್ಲಿರುವ ಜಿನ್ನಾ ಟವರ್ ಮತ್ತೊಮ್ಮೆ ಸುದ್ದಿಯಾಗಿದೆ.

ವಿವಾದಕ್ಕೆ ಫುಲ್ ಸ್ಟಾಪ್ ಹಾಕಲು ಗುಂಟೂರು ಜಿಲ್ಲಾಡಳಿತ  ತನ್ನ ಜಾಣ್ಮೆ ಪ್ರದರ್ಶಿಸಿದೆ. ತ್ರಿವರ್ಣ ಧ್ವಜದ ಬಣ್ಣ ಬಳಿದರೆ ವಿವಾದವೇ ಇರುವುದಿಲ್ಲ ಎಂದು ಅಧಿಕಾರಿಗಳು ಯೋಚಿಸಿ. ಜಿನ್ನಾ ಗೋಪುರಕ್ಕೆ ರಾಷ್ಟ್ರಧ್ವಜದ ಬಣ್ಣ ಹಚ್ಚಿದ್ದಾರೆ. ಜೊತೆಗೆ ಫೆಬ್ರವರಿ 3 ರಂದು ಟವರ್‌ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಅಧಿಕಾರಿಗಳು ಪ್ಲಾನ್‌ ಮಾಡಿದ್ದಾರೆ.

ಮುಹಮ್ಮದ್ ಅಲಿ ಜಿನ್ನಾ ಆಗಮನದ ಗುರುತಾಗಿ ಗುಂಟೂರು ನಗರದಲ್ಲಿ ಜಿನ್ನಾ ಗೋಪುರವನ್ನು ಕೆಲವು ದಶಕಗಳ ಹಿಂದೆ ನಿರ್ಮಿಸಲಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಗುಂಟೂರಿನಲ್ಲಿ ಸಾರ್ವಜನಿಕ ಸಭೆಗೆ ಬರಲು ಮುಹಮ್ಮದ್ ಅಲಿ ಜಿನ್ನಾ ಒಪ್ಪಿಕೊಂಡಿದ್ರು.  ಆದರೆ ಅನಿವಾರ್ಯ ಕಾರಣಗಳಿಂದ ಜಿನ್ನಾ ಅವರ ಗುಂಟೂರು ಭೇಟಿ ರದ್ದಾಗಿತ್ತು. ಹಾಗಾಗಿ ಅವರ ಹೆಸರಿನಲ್ಲಿ ಗೋಪುರವನ್ನು ನಿರ್ಮಿಸಲಾಗಿದೆ. ಕೆಲ ದಿನಗಳಿಂದ  ಟವರ್‌ಗೆ ಮರುನಾಮಕರಣ ಮಾಡುವಂತೆ ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.

ಭಾರತದ ವಿಭಜನೆಗೆ ಕಾರಣವಾದ ಜಿನ್ನಾ ಅವರ ಹೆಸರಿಗೆ ಬದಲಾಗಿ  ಅಬ್ದುಲ್ ಕಲಾಂ ಅವರ ಹೆಸರನ್ನು ಇಡಲು ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ. ಆದರೆ ಗುಂಟೂರು ಅಧಿಕಾರಿಗಳು ಟವರ್‌ಗೆ ಬಣ್ಣ ಹಾಕಿ, ರಾಷ್ಟ್ರಧ್ವಜವನ್ನೂ ಹಾರಿಸಲು ವ್ಯವಸ್ಥೆ ಮಾಡುತ್ತಿದ್ದಾರೆ.

 

Share Post